ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮೋಸ್‌ನತ್ತ ವಿದೇಶಿಯರ ಚಿತ್ತ

ಕ್ಷಿಪಣಿಗಳ ಬಿಡಿ ಭಾಗ ತಯಾರಿಕೆಯ ಉದ್ಯಮಗಳ ಕನಸುಗಳು ಗರಿಗೆದರಿವೆ
Last Updated 6 ಅಕ್ಟೋಬರ್ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ಸ್ವದೇಶಿ ನಿರ್ಮಿತಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್‌’ ಮತ್ತು ಸಬ್‌ ಸಾನಿಕ್‌ ಕ್ಷಿಪಣಿ ‘ನಿರ್ಭಯ್’ ಬಗ್ಗೆ ವಿಶ್ವದ ಹಲವು ದೇಶಗಳ ಆಸಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ಕ್ಷಿಪಣಿಗಳ ಬಿಡಿ ಭಾಗ ತಯಾರಿಕೆಯ ಉದ್ಯಮಗಳ ಕನಸುಗಳು ಗರಿಗೆದರಿವೆ.

ರಷ್ಯಾದ ಸಹಭಾಗಿತ್ವದಲ್ಲಿ ತಯಾರಿಸಿದ ಬ್ರಹ್ಮೋಸ್‌ ಕ್ಷಿಪಣಿಗೆ ಬ್ರೆಜಿಲ್‌, ಚಿಲಿ, ಫಿಲಿಫಿನ್ಸ್‌, ಥೈಲ್ಯಾಂಡ್‌, ಈಜಿಪ್ಟ್‌, ಸಿಂಗಪುರ, ದಕ್ಷಿಣ ಕೊರಿಯಾ, ಅಲ್ಜೀರಿಯಾ, ಗ್ರೀಸ್‌, ದಕ್ಷಿಣ ಆಫ್ರಿಕಾ, ಮಲೇಷ್ಯಾ ಮತ್ತು ಬಲ್ಗೇರಿಯಾ ಆಸಕ್ತಿ ತೋರಿವೆ. ಇನ್ನು ಕೆಲವೇ ತಿಂಗಳಲ್ಲಿ ಕೆಲವು ದೇಶಗಳ ಜತೆ ಬ್ರಹ್ಮೋಸ್‌ ಏರೋಸ್ಪೇಸ್‌ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬ್ರಹ್ಮೋಸ್‌ ಕ್ಷಿಪಣಿ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಚಲಿಸುತ್ತದೆ. ಅಂದರೆ ಪ್ರತಿ ಗಂಟೆಗೆ ಸುಮಾರು 3,450 ಕಿ.ಮೀ ವೇಗದಲ್ಲಿ ಸಾಗಿ ಗುರಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಈ ಕಾರಣಕ್ಕಾಗಿ ಹಲವು ದೇಶಗಳು ಆಸಕ್ತಿ ತಳೆದಿವೆ.

ಕೋವಿಡ್‌ನಿಂದ ರಕ್ಷಣಾ ಉಪಕರಣಗಳು ಮತ್ತು ಬಿಡಿಭಾಗಗಳ ತಯಾರಿಕಾ ಘಟಕಗಳು ಹಿನ್ನಡೆ ಅನುಭವಿಸಿರುವ ಬೆನ್ನಲ್ಲೇ ಹೊಸ ಬೆಳವಣಿಗೆ ಈ ವಲಯದಲ್ಲಿ ಹರ್ಷವನ್ನು ಮೂಡಿಸಿದೆ. ಇವುಗಳನ್ನು ನೆಚ್ಚಿಕೊಂಡಿರುವ ಸಣ್ಣ– ಪುಟ್ಟ ಉದ್ಯಮಗಳು ಪುಟಿದೇಳುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

‘ನಿರ್ಭಯ್’ ಮತ್ತೊಂದು ಸೇರ್ಪಡೆ: ಸಮೀಪದ ದೂರವನ್ನು ಅತಿವೇಗದಲ್ಲಿ ಕ್ರಮಿಸಿ ಗುರಿಯನ್ನು ನಾಶ ಪಡಿಸಬಲ್ಲ ಸಬ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ‘ನಿರ್ಭಯ್‌’ ಕೂಡಾ ಜಾಗತಿಕವಾಗಿ ಗಮನ ಸೆಳೆದಿದೆ. ಕಮಾಂಡ್‌, ಕಂಟ್ರೋಲ್‌ ಕಟ್ಟಡಗಳು, ಹೆಡ್‌ಕ್ವಾರ್ಟರ್ಸ್‌ಗಳು, ಶತ್ರುದೇಶದ ರಕ್ಷಣಾ ಪಡೆಗಳು, ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಬಲ್ಲದು.

ಈ ಕ್ಷಿಪಣಿ ಗರಿಷ್ಠ 15 ಕಿ.ಮೀ ಎತ್ತರಕ್ಕೆ ಏರಬಲ್ಲದು ಮತ್ತು ನೆಲಮಟ್ಟದಿಂದ ಕೇವಲ 4 ಮೀಟರ್‌ಗಳಷ್ಟು ಎತ್ತರದಲ್ಲೂ ಹಾರಬಲ್ಲದು. ಸುಮಾರು 200 ರಿಂದ 300 ಕೆ.ಜಿ ತೂಕದ ಸಿಡಿತಲೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಅದನ್ನು 400 ಕಿ.ಮೀ ವಿಸ್ತರಿಸುವ ಪ್ರಯತ್ನ ಸಾಗಿದೆ. ಇವು ಪರಮಾಣು ಸಿಡಿತಲೆಗಳನ್ನೂ ಸಾಗಿಸಬಲ್ಲವು. ಇದರ ವಿಶೇಷ ಎಂದರೆ, ರಾಕೆಟ್‌ನಂತೆ ಚಿಮ್ಮಬಲ್ಲದು, ವಿಮಾನದಂತೆ ಬದಲಾಗಿ, ಗುರಿಯತ್ತ ಚಲಿಸುತ್ತದೆ.

ಸ್ಥಳೀಯ ಉದ್ಯಮಗಳಿಗೆ ಅನುಕೂಲ

ಅಗ್ನಿ, ಪೃಥ್ವಿ, ಧನುಷ್ ಸೇರಿದಂತೆ ವಿವಿಧ ರೀತಿಯ ಕ್ಷಿಪಣಿಗಳಿಗೆ ಬಿಡಿಭಾಗಗಳು ಬಹುತೇಕ ಬೆಂಗಳೂರಿನಲ್ಲೇ ತಯಾರಾಗುತ್ತವೆ. ಆ ಕ್ಷಿಪಣಿಗಳನ್ನು ಭಾರತದ ಸೇನೆ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಆದರೆ, ಬ್ರಹ್ಮೋಸ್‌ಗೆ ಜಾಗತಿಕ ಬೇಡಿಕೆ ಬಂದಿರುವುದರಿಂದ ಬಿಡಿ ಭಾಗಗಳು ಮತ್ತು ಇತರ ಉಪಕರಣಗಳ ತಯಾರಿಕರಿಗೆ ಹೆಚ್ಚಿನ ಕೆಲಸ ಸಿಗಲಿದೆ ಎನ್ನುತ್ತಾರೆ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಗಿರೀಶ್ ಲಿಂಗಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT