‘ರಸ್ತೆ, ಪಾದಚಾರಿ ಮಾರ್ಗ ಸರಿಪಡಿಸಿ’
ನಗರದ ಕೇಂದ್ರ ಬಿಂದುವಾಗಿರುವ ಮೆಜೆಸ್ಟಿಕ್ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಕೆಂಪೇಗೌಡ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸುಬೇದಾರ್ ಛತ್ರಂನ ಎರಡನೇ ಅಡ್ಡರಸ್ತೆ, ಮೈಸೂರ್ ಬ್ಯಾಂಕ್ ಗಣಪತಿ ದೇವಸ್ಥಾನದ ಮುಂಭಾಗ ಹಾಗೂ ಕಾಳಿದಾಸ ಮಾರ್ಗದ ಸಾಗರ್ ಟಾಕೀಸ್ ವೃತ್ತಗಳಲ್ಲಿನ ರಸ್ತೆಗಳಲ್ಲಿ ವಾಹನಗಳು ಸಂಚಾರ ದುಸ್ತರವಾಗಿದೆ. ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಓಡಾಡುವುದು ಕಷ್ಟವಾಗಿದೆ.
–ಶಿವಪ್ರಸಾದ,ಸ್ಥಳೀಯ ನಿವಾಸಿ
****
‘ಕಸದ ತೊಟ್ಟಿಯಾದ ಮರದ ಬೇಲಿ’
ಲಾಲ್ಬಾಗ್ ರಸ್ತೆಯ ದಂತ ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲಿರುವ ಮರವೊಂದು ದೊಡ್ಡದಾಗಿ ಬೆಳೆದಿದೆ. ಆದರೆ, ಅದಕ್ಕೆ ಅಳವಡಿಸಿರುವ ಕಬ್ಬಿಣದ ಬೇಲಿ ತೆಗೆಯದ ಕಾರಣ ಅದು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಬೇಲಿಯನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.
–ರೇಖಾ ಮನೋಹರ್
****
ಶೀಘ್ರ ರಸ್ತೆ ಗುಂಡಿ ಮುಚ್ಚಿ’
‘ಕುಂಬ್ಳೆ ವೃತ್ತದಿಂದ ಹಳೆ ಮದ್ರಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಗುಂಡಿಮಯವಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಗುಂಡಿಗಳಿಂದಾಗಿ ಒಂದಿಲ್ಲೊಂದು ಅಪಘಾತ ಸಂಭವಿಸಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಗುಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತದೆ. ದ್ವಿಚಕ್ರ ವಾಹನ ಸವಾರರು ರಸ್ತೆ ಕಾಣದೆ ಗುಂಡಿಯೊಳಗೆ ವಾಹನ ಇಳಿಸಿ ಉರುಳಿ ಬಿದ್ದ ಉದಾಹರಣೆಗಳೂ ಸಾಕಷ್ಟಿವೆ. ಮಳೆಗಾಲ ಆರಂಭವಾದರೂ ಇದುವರೆಗೂ ಈ ಗುಂಡಿಯನ್ನು ಮುಚ್ಚುವ ಕೆಲಸ ಆಗಿಲ್ಲ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’.
–ಮಾಲತೇಶ್ ಸುಬೇದಾರ್,ದ್ವಿಚಕ್ರ ವಾಹನ ಸವಾರ
***
‘ಪಾದಚಾರಿ ಮಾರ್ಗ ದುರಸ್ತಿ ಮಾಡಿ’
‘ಹಳೆ ಮದ್ರಾಸ್ ಮುಖ್ಯರಸ್ತೆ ಟ್ರಿನಿಟಿ ಮೆಟ್ರೊ ಸ್ಟೇಷನ್ ಬಳಿಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಮಕ್ಕಳು, ವೃದ್ಧರು ಈ ಹಾದಿಯಲ್ಲಿ ಸಾಗುವುದೇ ಕಷ್ಟವಾಗಿದೆ’.
‘ಕೇಬಲ್ ಅಳವಡಿಸುವ ಸಲುವಾಗಿ ಕೆಲ ತಿಂಗಳ ಹಿಂದೆ ರಸ್ತೆಯ ಒಂದು ಬದಿಯನ್ನು ಅಗೆದಿದ್ದರು. ಬಳಿಕ ಆ ಜಾಗದಲ್ಲಿ ಮಣ್ಣು ಹಾಕಿ ಹೋಗಿದ್ದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ರಸ್ತೆ ಅಂಚಿನಲ್ಲಿ ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ಇದೆ. ಬಿಬಿಎಂಪಿ ಹಾಗೂ ಬೆಸ್ಕಾಂ ಸಿಬ್ಬಂದಿ ತುರ್ತಾಗಿ ದುರಸ್ತಿ ಕಾರ್ಯ ಕೈಗೊಂಡು ನಾಗರಿಕರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು’
ದೀಪಕ್, ರಾಜೇಶ್,ಶಾಲಾ ವಿದ್ಯಾರ್ಥಿಗಳು
***
‘ಕೇಬಲ್ ಹಾವಳಿ ತಪ್ಪಿಸಿ’
ನಗರದ ಲಿಡೋ ಮಾಲ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಕೇಬಲ್ಗಳು ಬಿದ್ದಿರುವುದರಿಂದ ಸಾರ್ವಜನಿಕರು ಓಡಾಡಲು ಪ್ರಯಾಸ ಪಡಬೇಕಾಗಿದೆ. ಪ್ರತಿ ಬಾರಿ ಮಳೆ ಬಂದಾಗ ಈ ಸಮಸ್ಯೆ ಆರಂಭವಾಗುತ್ತದೆ. ಕೇಬಲ್ಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅನಧಿಕೃತವಾಗಿ ಹಲವಾರು ಜನ ಕೇಬಲ್ಗಳನ್ನು ಅಳವಡಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಕೇಬಲ್ ಹಾವಳಿ ತಪ್ಪಿಸಲು ಕಾನೂನು ಕ್ರಮ ಕೈಗೊಳ್ಳಬೇಕು.
–ರಿತೇಶ್, ಕರಣ್ ಶ್ರೀವಾತ್ಸವ್,ಪಾದಚಾರಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.