ಬೆಂಗಳೂರು: ರಾಜ್ಯ ಸರ್ಕಾರದ ಜನ ವಿರೋಧಿ ನಿರ್ಧಾರಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ಮತ್ತು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
‘200 ಯೂನಿಟ್ವರೆಗೆ ವಿದ್ಯುತ್ ಉಚಿತ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ 80 ಯೂನಿಟ್ವರೆಗೆ ಎಂದು ಆದೇಶ ಹೊರಡಿಸಿ ಜನ ವಿರೋಧಿ ನೀತಿ ಪ್ರದರ್ಶಿಸಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 10 ಯೂನಿಟ್ ಹೆಚ್ಚುವರಿ ಬಳಸಿ ಎಂದು ಹೇಳಿದ್ದಾರೆ. ಅಂದರೆ 80 ಯೂನಿಟ್ ಬಳಸಬಹುದು. ಆದರೆ 80 ಯೂನಿಟ್ಗಿಂತ ಹೆಚ್ಚು ಬಳಸುವಂತಿಲ್ಲ ಎಂದು ಷರತ್ತು ಹಾಕಿದ್ದಾರೆ. ಹಾಗಿದ್ದರೆ 200 ಯೂನಿಟ್ವರೆಗೆ ಬಳಸಿದರೆ ಉಚಿತ ಎಂಬ ಮಾತು ಹೇಳಿದ್ದೇಕೆ? ಇದು ವಚನ ಭ್ರಷ್ಟತೆ ಅಲ್ಲವೆ’ ಎಂದು ಪ್ರಶ್ನಿಸಿದರು.
‘ಅಲ್ಲದೇ, ವಿದ್ಯುತ್ ಶುಲ್ಕವನ್ನು ಏರಿಸಿದ್ದೀರಿ. ಒಂದು ಯೂನಿಟ್ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್ಗೆ ₹56 ಹೆಚ್ಚಿಸಿದಂತಾಗುತ್ತದೆ. ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಿ ಮಾಡಲಾಗುತ್ತಿದೆ. 70 ಪೈಸೆ ಹೆಚ್ಚಳವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.
‘ಬಿಜೆಪಿ ಸರ್ಕಾರ ಇದ್ದಾಗ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ ₹5 ನೀಡುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದರಲ್ಲಿ ₹1.5 ಕಡಿಮೆ ಮಾಡಿದೆ. ಇದರಿಂದ ಬಡ ರೈತರಿಗೆ ಸಹಾಯ ಮಾಡಿದಂತಾಯಿತೆ’ ಎಂದು ಅವರು ಪ್ರಶ್ನಿಸಿದರು.