ಬೆಂಗಳೂರು: ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಸಿಗದೆ ಘಟಕಗಳಲ್ಲೇ ಉಳಿಯುವ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಯನ್ನು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವ ಕೆಲಸಕ್ಕೆ ಬಿಎಂಟಿಸಿ ನಿಯೋಜಿಸಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಇರುವ ಸಮಯ ಅಂದರೆ ಬೆಳಿಗ್ಗೆ 8ರಿಂದ 11 ಗಂಟೆ ತನಕ ಮತ್ತು ಸಂಜೆ 4.30ರಿಂದ 7.30ರ ತನಕ ಬಸ್ ನಿಲ್ದಾಣಗಳಲ್ಲಿ ನಿಂತಿರುವ ಪ್ರಯಾಣಿಕರಿಗೆ ಸಿಬ್ಬಂದಿ ಸಲಹೆ ನೀಡಬೇಕು.
‘ಅಂತರ ಕಾಯ್ದುಕೊಂಡು ಸಾಲಾಗಿ ನಿಂತು ಬಸ್ ಹತ್ತುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದ ಪ್ರಯಾಣಿಕರು ಬಸ್ ಹತ್ತದಂತೆ ನೋಡಿಕೊಳ್ಳಬೇಕು. ಬಸ್ ನಿಲ್ದಾಣಗಳಲ್ಲಿ ನಿಂತಾಗಲೂ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಬೇಕು’ ಎಂದು ಸಂಸ್ಥೆ ಸುತ್ತೋಲೆಯಲ್ಲಿ ತಿಳಿಸಿದೆ.