ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಚಾಲಕನ ಮೇಲೆ ದುಂಡಾವರ್ತನೆ ತೋರಿದ ಬಿಎಂಟಿಸಿ ಚಾಲಕ ಅಮಾನತು

ಮಹಾದೇವಪುರದಲ್ಲಿ ಬೈಕ್‌ ಸವಾರನ ಮೇಲೆ ಹಲ್ಲೆ l ಚಾಲಕ ಅಮಾನತು
Last Updated 31 ಜನವರಿ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರದಲ್ಲಿ ಬೈಕ್ ಸವಾರರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಬಸ್‌ ಚಾಲಕನನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.

ರಸ್ತೆ ಬದಿ ನಿಂತಿದ್ದ ಬೈಕ್ ಸವಾರ‌ನಿಗೆ ಬಿಎಂಟಿಸಿ ವೋಲ್ವೊ ಬಸ್ ಚಾಲಕ ಸಂತೋಷ್ ಬಡಿಗೇರ ಹಲ್ಲೆ ನಡೆಸಿದ್ದು, ಘಟನೆಯನ್ನು ಚಿತ್ರಿಕರಿಸಿರುವ ಹಮೀದ್‌ ಎಂಬುವರು ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಹಲ್ಲೆ ನಡೆಯುವಾಗ ಸವಾರ ಬೈಕ್‌ ಮೇಲೆಯೇ ಕುಳಿತಿದ್ದು, ಪ್ರತಿರೋಧ ವ್ಯಕ್ತಪಡಿಸಲು ಸಾಧ್ಯವಾಗಿಲ್ಲ. ಜತೆಯಲ್ಲಿದ್ದ ಯುವತಿಯೊಬ್ಬರು ಹಲ್ಲೆ ಮಾಡದಂತೆ ಮನವಿ ಮಾಡಿದರೂ ತಲೆ ಮತ್ತು ಪಕ್ಕೆಗೆ ಮೂರು ಬಾರಿ ಬಲವಾಗಿ ಸಂತೋಷ್ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಚಾಲಕನನ್ನು ಹಮೀದ್‌ ಪ್ರಶ್ನೆ ಮಾಡಿದ್ದು, ‘ಕನ್ನಡದಲ್ಲಿ ಮಾತಾಡು, ನೀನ್ಯಾರು ಕೇಳಲು’ ಎಂದು ದರ್ಪದಿಂದ ಉತ್ತರಿಸಿರುವುದು ಕೂಡ ಈ ವಿಡಿಯೊದಲ್ಲಿ ಇದೆ.

‘ಗುರುವಾರ ಬೆಳಿಗ್ಗೆ ಕಚೇರಿಗೆ ತೆರಳುವ ದಾರಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ನಾಗರಿಕರನ್ನು ಸಾರ್ವಜನಿಕವಾಗಿ ಥಳಿಸುವ ಹಕ್ಕು ಬಿಎಂಟಿಸಿ ಸಿಬ್ಬಂದಿಗೆ ಇದೆಯೇ’ ಎಂದು ಅವರು ಪ್ರಶ್ನಿಸಿದ್ದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಿಎಂಟಿಸಿ, ಬೆಂಗಳೂರು ಪೊಲೀಸ್‌ ಸೇರಿ ಹಲವರ ಟ್ವಿಟರ್ ಖಾತೆಗಳಿಗೆ ಹಮೀದ್ ಟ್ಯಾಗ್‌ ಮಾಡಿದ್ದರು. ‘ನಮಗೆ ಸುರಕ್ಷಿತ ಬೆಂಗಳೂರು ರಸ್ತೆಗಳು ಬೇಕು. ದಯವಿಟ್ಟು ಈ ಘಟನೆಯನ್ನು ನೋಡಿ ಮತ್ತು ಅಗತ್ಯ ಕ್ರಮಗಳ ಬಗ್ಗೆ ಯೋಚಿಸಿ’ ಎಂದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹಮೀದ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ, ‘ಚಾಲಕ ಸಂತೋಷ್ ಬಡಿಗೇರ್‌ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮುಂದೆ ವಿಚಾರಣೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದೆ.

‘ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಯಾರು ಮತ್ತು ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಬೈಕ್ ಸವಾರ ಪೊಲೀಸ್ ಠಾಣೆಗೂ ದೂರು ನೀಡಿಲ್ಲ. ವಿಡಿಯೊ ಸೆರೆ ಹಿಡಿದಿರುವ ಹಮೀದ್ ಅವರನ್ನು ಸಂಪರ್ಕಿಸಿ ಘಟನೆ ಬಗ್ಗೆ ವಿವರ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT