ಬೆಂಗಳೂರು: ‘ಸಮಾಜದಲ್ಲಿ ಯಾವುದೇ ಸಂದರ್ಭ ಎದುರಾದರೂ ಸಮಾಜ ಕಾರ್ಯ ವಿಭಾಗ ಕಲಿಸಿಕೊಟ್ಟ ಪಾಠ ನೆನಪಿಗೆ ಬಂದಾಗ ಧೈರ್ಯ ಬರುತ್ತದೆ. ಜೀವನಕ್ಕಿಂತ ಮುಖ್ಯ ಯಾವುದೂ ಅಲ್ಲ. ವಿಪತ್ತು ಎದುರಾದಾಗ ರಕ್ಷಿಸಲು ಯಾರು ಮೊದಲು ಹೋಗುತ್ತಾರೋ ಅದುವೇ ಸಮಾಜಕ್ಕೆ ಮಾಡುವ ಉತ್ತಮ ಕಾರ್ಯ’ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಶೇಖರ್ ಗಣಗಲೂರು ಅವರ ‘ಗೆಲುವು’ ಹಾಗೂ ಎನ್. ಗಂಗಾರೆಡ್ಡಿ ಅವರ ‘ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೃತಿ ಪರಿಚಯ ಮಾಡಿದ ಕೆ.ಎ.ಗಂಗಣ್ಣ, ‘ಗೆಲುವು ಮೌಲ್ಯಯುತವಾಗಿರಬೇಕು. ಟೀಕೆ ಮಾಡುವವರನ್ನು ಸಂಪನ್ಮೂಲವಾಗಿ ಬಳಕೆ ಮಾಡಿಕೊಳ್ಳಬೇಕು. ಹೊಸ ಪ್ರಾರಂಭ, ಹೊಸಪ್ರಗತಿ, ಹೊಸ ವಿಶ್ಲೇಷಣೆ ಗೆಲುವಿಗೆ ದಾರಿಯಾಗುತ್ತದೆ’ ಎಂದರು.
ಅನ್ನಪೂರ್ಣೆಶ್ವರಿ ನಗರದ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ, ‘ಜೀವನದಲ್ಲಿ ಏನೂ ಇಲ್ಲದವರು ಸರಾಗವಾಗಿ ಜೀವನ ನಡೆಸುತ್ತಾರೆ. ಎಲ್ಲ ಇದ್ದವರು ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಯುವಕರು ಮೊಬೈಲ್ ಪ್ರಪಂಚದಿಂದ ಹೊರಬರಬೇಕು. ಪುಸ್ತಕಗಳನ್ನು ಓದುವ ಮೂಲಕ ಆದರ್ಶ ಬದುಕು ಕಾಣಬೇಕು’ ಎಂದರು.
ಸಯ್ಯದ್ ಅಹ್ಮದ್, ಆರ್. ಗೋಪಿನಾಥ್, ಕುಸುಮಾ ಶೇಖರ್ ಗಣಗಲೂರು, ಗಂಗಾ ರೆಡ್ಡಿ ಹಾಜರಿದ್ದರು.