ಬೆಂಗಳೂರು: ನಗರದಲ್ಲಿ ಸಿನಿಮೀಯ ರೀತಿಯಲ್ಲಿ ಜ್ಯೋತಿಷಿಯ ಪುತ್ರನನ್ನು ಅಪಹರಿಸಿ, ₹ 5 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿಷಿ ಮಣಿವಾಸಕನ್ ಅವರ 18 ವರ್ಷದ ಪುತ್ರನನ್ನು ತುಮಕೂರಿನ ಅರ್ಜುನ್ ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ಪೊಲೀಸರು ಹೇಳಿದರು.
‘ನಗರದ ಪಿಜಿಯೊಂದರಲ್ಲಿ ಆರೋಪಿ ಅರ್ಜುನ್ ನೆಲೆಸಿದ್ದ. ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದ. ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಆತ ದುಡ್ಡಿಗಾಗಿ ಯಾರನ್ನಾದರೂ ಅಪಹರಣ ಮಾಡಬೇಕೆಂದು ಯೋಜನೆ ರೂಪಿಸಿದ್ದ’ ಎಂದು ಮೂಲಗಳು ಹೇಳಿವೆ.
‘ಜ್ಯೋತಿಷಿಯ ಪುತ್ರ ಮೆಡಿಕಲ್ ಸೀಟಿಗಾಗಿ ಕೋಚಿಂಗ್ ತೆರಳುತ್ತಿರುವುದನ್ನು ಆರೋಪಿ ಗಮನಿಸಿದ್ದ. ಆರೋಪಿಗೆ ಸಿನಿಮಾ ವೀಕ್ಷಣೆ ಹವ್ಯಾಸವಿತ್ತು. ಸಿನಿಮಾದಿಂದ ಪ್ರೇರಣೆಗೊಂಡು ಅಪಹರಣಕ್ಕೆ ಸಿನಿಮಾದಲ್ಲಿ ಬರುವ ದೃಶ್ಯಾವಳಿಯಂತೆಯೇ ಯೋಜನೆ ರೂಪಿಸಿದ್ದ. ಡ್ರಾಪ್ ಕೇಳುವ ನೆಪದಲ್ಲಿ ಕಾರನ್ನು ಅಡ್ಡಗಟ್ಟಿದ್ದ ಆರೋಪಿ ಯುವಕ ಪುತ್ರನ ಹಣೆಗೆ ಗನ್ಯಿಟ್ಟು ಅಪಹರಣ ಮಾಡಿದ್ದ. ಬಳಿಕ ಜ್ಯೋತಿಷಿಗೆ ವಾಟ್ಸ್ಆ್ಯಪ್ ಕರೆ ಮಾಡಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಹೆದರಿಸಲು ಬಳಸಿದ್ದ ಗನ್ ಡಮ್ಮಿ ಎಂಬುದು ತನಿಖೆಯಿಂದ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.