ಪೀಣ್ಯ ದಾಸರಹಳ್ಳಿ: ಮಳೆಗಾಲ ಆರಂಭವಾಗುವ ಮೊದಲು ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡು ಚಿಕ್ಕಬಾಣಾವರ ಕೆರೆಯ ಪುನರುಜ್ಜೀವನ ಕಾಮಗಾರಿ ಭರದಿಂದ ಸಾಗಿದೆ.
105 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಯನ್ನು ಬಿಡಿಎ ಮಂಜೂರು ಮಾಡಿರುವ ₹12.60 ಕೋಟಿ ಮತ್ತು ಪುರಸಭೆಯ ₹2 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.
ಈ ಮೊದಲು ಕೆರೆಯು ಕೊಳಚೆಯಿಂದ ತುಂಬಿಹೋಗಿತ್ತು. ಹೂಳು, ಹೂಳು ಮಿಶ್ರಿತ ಮರಳು ಕೂಡ ತುಂಬಿತ್ತು. ಈಗ ಹೂಳು ತೆಗೆದು ಕೆರೆ ದಂಡೆ ಅಥವಾ ನಿಗದಿತ ಡಂಪ್ ಯಾರ್ಡ್ಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಕೆರೆಯ ಸುತ್ತ ವಾಕ್ವೇ ಮಣ್ಣಿನ ಒಡ್ಡು ನಿರ್ಮಿಸುವ ಕಾರ್ಯವನ್ನು ಬಿಡಿಎ ಮಾಡುತ್ತಿದೆ. ತ್ಯಾಜ್ಯ ನೀರು ಕೆರೆಗೆ ಹರಿಯದಂತೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
‘ಈಗಾಗಲೇ ಕೆರೆಯ ಅಂಗಳದಲ್ಲಿದ್ದ ಜೊಂಡು, ಗಿಡಗಂಟಿಗಳನ್ನು ತೆಗೆಯಲಾಗಿದೆ. ಕೆರೆಯ ಹೂಳು ತೆಗೆದು ವಾಕಿಂಗ್ ಪಾತ್ ನಿರ್ಮಿಸಲಾಗುತ್ತಿದೆ.
ಈಗಾಗಲೇ ಶೇ 40ರಷ್ಟು ಕೆಲಸ ಮುಗಿದಿದೆ’ ಎಂದು ಪುರಸಭೆ ಮುಖ್ಯ ಅಧಿಕಾರಿ ಎಚ್.ಎ. ಕುಮಾರ್ ಮಾಹಿತಿ ನೀಡಿದರು. ‘ಮನೆ, ಕೈಗಾರಿಕೆ, ಅಪಾರ್ಟ್ಮೆಂಟ್, ರಾಜಕಾಲುವೆಗಳಿಂದ ಬರುತ್ತಿದ್ದ ಕಲುಷಿತ ನೀರು ಕೆರೆಗೆ ಬಾರದಂತೆ ತಡೆಯಲಾಗಿದೆ. ಕೆರೆ ಮಣ್ಣು, ಕಲುಷಿತ ನೀರು ತೆಗೆದು ಸುತ್ತಲೂ ಸಂರಕ್ಷಣೆ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಬಿ.ಎಂ. ಚಿಕ್ಕಣ್ಣ ಮಾಹಿತಿ ನೀಡಿದರು.
‘ಕೆರೆಯ ಮಣ್ಣು ಎತ್ತುವ ಕಾರ್ಯ ಮಾಡಲಾಗುತ್ತದೆ. ಮಳೆಗಾಲ ಬರುವಷ್ಟರಲ್ಲಿ ಬೇಗ ಕಾಮಗಾರಿ ಮುಗಿಯಲಿದೆ’ ಎಂದು ಬಿಡಿಎ ಎಂಜಿನಿಯರ್ ನಿರಂಜನ್ ವಿಶ್ವಾಸ ವ್ಯಕ್ತಪಡಿಸಿದರು.