ಶುಕ್ರವಾರ, ಮಾರ್ಚ್ 31, 2023
33 °C
ರಾಜಧಾನಿ ಅಭಿವೃದ್ಧಿ

ನನ್ನ 10 ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಲಿ: ರಾಮಲಿಂಗಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ಉಸ್ತುವಾರಿಯನ್ನೂ ಹೊಂದಿರುವ ಮುಖ್ಯಮಂತ್ರಿಗೆ 10 ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕೆ ಸೂಕ್ತ ಉತ್ತರ ನೀಡಲಿ. ಅಗತ್ಯ ಇದ್ದರೆ ಅವರು ಕರೆಯುವ ವೇದಿಕೆಯಲ್ಲಿ ಬಹಿರಂಗ ಚರ್ಚೆಗೂ ಸಿದ್ಧ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ವಿರೋಧ ಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಪಂಥಾಹ್ವಾನ ನೀಡಿದ್ದಾರೆ. ಆ ಸವಾಲು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಆದರೆ, ಅದಕ್ಕೂ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ’ ಎಂದರು.

‘ಸಿಲಿಕಾನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರು ಈಗ ರಸ್ತೆ ಗುಂಡಿ ಸಿಟಿ ಆಗಿದೆ. ಇದೇನಾ ನಿಮ್ಮ ಅಭಿವೃದ್ಧಿ. ರಸ್ತೆ ಗುಂಡಿಗಳಿಗೆ 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ಅಪಘಾತಗಳಾಗಿವೆ. ಇದೇನಾ ನೀವು ಹೇಳುವ ಅಭಿವೃದ್ಧಿ. ಪ್ರಧಾನಿ ಭೇಟಿ ಸಮಯದಲ್ಲಿ ಹಾಕಿದ್ದ ಡಾಂಬರ್ ರಸ್ತೆ ಎರಡೇ ದಿನದಲ್ಲಿ ಮಾಯವಾಯಿತು. ಬೆಂಗಳೂರು ಅಭಿವೃದ್ಧಿಗೆ ಇದೇನಾ ಕೊಡುಗೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ರೆಡ್ಡಿ ಪ್ರಶ್ನಿಸಿದರು.

‘ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ಶೇ 40 ಕಮಿಷನ್ ಪಡೆದಿರುವುದು ನಿಮ್ಮ ಅಭಿವೃದ್ಧಿಯೇ? ಹಿಂದೆಂದೂ ಕಂಡುಕೇಳದ ಪ್ರವಾಹ ಬರುವಂತೆ ನಗರದ ಮೂಲಸೌಕರ್ಯಹಾಳು ಮಾಡಿರುವುದೇ ಅಭಿವೃದ್ದಿಯೇ? ಮತ ಕಳವು ಮಾಡಿ ಐಎಎಸ್ ಅಧಿಕಾರಿಗಳ ತಲೆದಂಡ ಆಗಿರುವುದು ನಿಮ್ಮ ಅಭಿವೃದ್ಧಿಯೇ?’ ಎಂದೂ ಕೇಳಿದರು.

‘ರಾತ್ರೋರಾತ್ರಿ ₹ 10 ಸಾವಿರ ಕೋಟಿ ಬಿಬಿಎಂಪಿ ಬಜೆಟ್ ಘೋಷಣೆ ಮಾಡಿ, ಯಾವ ಕಾರ್ಯಕ್ರಮವನ್ನೂ ಜಾರಿ ಮಾಡದೇ ಇರುವುದು ನಿಮ್ಮ ಅಭಿವೃದ್ಧಿಯೇ? ನಿಮ್ಮ ಸರ್ಕಾರದ ಪ್ರಚಾರದ ಗಿಮಿಕ್ ‘ನಮ್ಮ ಕ್ಲಿನಿಕ್’ ಯೋಜನೆ ವಿಫಲವಾಗಿರುವುದು ಸಾಧನೆಯೇ? ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಬೇರೆ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ನಿಮ್ಮ ಅಭಿವೃದ್ಧಿಯೇ? ಉಪನಗರ ರೈಲು ಯೋಜನೆ, ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಕುಂಠಿತವಾಗಿರುವುದು ನೀವು ಹೇಳುವ ಸಾಧನೆ ಅಲ್ಲವೇ? ನೀವು ಹೇಳುವ ಅಭಿವೃದ್ಧಿಯಲ್ಲಿ ಒಂದು ರಸ್ತೆ, ಫೈ ಓವರ್ ನಿರ್ಮಾಣ ಮಾಡಿರುವುದನ್ನು ಹೇಳಬಲ್ಲಿರಾ’ ಎಂದು ಪ್ರಶ್ನಿಸಿದ ರಾಮಲಿಂಗಾರೆಡ್ಡಿ, ಉತ್ತರಿಸುವಂತೆ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು