ಬೊಮ್ಮನಹಳ್ಳಿ: ಹಾಸಿಗೆ ಕೊರತೆ ನೀಗಿಸಲು ಎಚ್ಎಸ್ಆರ್ ಬಡಾವಣೆಯಲ್ಲಿರುವ ಸರ್ಕಾರಿ ವಿದ್ಯಾರ್ಥಿ ನಿಲಯವನ್ನು ಆಮ್ಲಜನಕ ಪೂರೈಕೆ ಸಹಿತ 150 ಹಾಸಿಗೆಗಳ ಕೊರೊನಾ ಆರೈಕೆ ಕೇಂದ್ರ ತೆರೆಯಲಾಗಿದೆ.
ರೋಗಿಗಳಿಗೆ ಉಚಿತ ಔಷಧ, ಊಟದ ವ್ಯವಸ್ಥೆ ಮಾಡಲಾಗಿದೆ. ಆಮ್ಲಜನಕ ಕಾನ್ಸನ್ಟ್ರೇಟರ್ ಗಳು ಹಾಗು ತುರ್ತು ಸಂದರ್ಭಕ್ಕೆ ತ್ವರಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಸತೀಶ್ ರೆಡ್ಡಿ 'ಸೋಂಕಿತರು ಆಸ್ಪತ್ರೆಗೆ ಬಂದಾಗ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಕಲ ಸೌಲಭ್ಯವನ್ನು ಒದಗಿಸಲಾಗಿದೆ. ಇದರ ಜತೆ ಈಗಾಗಲೇ ಸಿಂಗಸಂದ್ರದಲ್ಲಿ 50 ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು.
‘ಹೊಂಗಸಂದ್ರದಲ್ಲಿ 100 ಹಾಸಿಗೆ, ಅರಕೆರೆ, ಪುಟ್ಟೇನಹಳ್ಳಿಯಲ್ಲೂ ಇದೇ ರೀತಿ ಆರೈಕೆ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಮೂರು ದಿನದಲ್ಲಿ ಒಟ್ಟು 500 ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗುವುದು' ಎಂದರು.
ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ, ಬೊಮ್ಮನಹಳ್ಳಿ ವಲಯ ಆರೋಗ್ಯ ವೈದ್ಯಾಧಿಕಾರಿ ನಾಗೇಂದ್ರ, ಕಾರ್ಯಪಾಲಕ ಎಂಜಿನಿಯರ್ ಶೇಷಾದ್ರಿ ಇದ್ದರು.