ವೈಟ್ಟಾಪಿಂಗ್ | ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಗೌರವ್ ಗುಪ್ತ

ಬೆಂಗಳೂರು: ಸಂಜಯನಗರದ 80 ಅಡಿ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಜಯನಗರದ 80 ಅಡಿ ರಸ್ತೆಯು ಸುಮಾರು 1 ಕಿ.ಮೀ ಇದ್ದು, ಇದರಲ್ಲಿ ಅಶ್ವತ್ಥನಗರದ ದ್ವಾರದಿಂದ ಎಂ.ಎಸ್ .ರಾಮಯ್ಯ ಆಸ್ಪತ್ರೆ ರಸ್ತೆಯ ಸಿಗ್ನಲ್ವರೆಗೆ ವೈಟ್ಟಾಪಿಂಗ್ ಕಾಮಗಾರಿಯನ್ನು ಪಾಲಿಕೆಯ ಯೋಜನಾ ವಿಭಾಗವು ಮೇ ಅಂತ್ಯದಲ್ಲಿ ಕೈಗೆತ್ತಿಕೊಂಡಿದೆ. ₹ 9.82 ಕೋಟಿ ವೆಚ್ಚದಲ್ಲಿ ಕಾಮಗಾರಿ ಇದಾಗಿದೆ. 30 ದಿನಗಳಲ್ಲಿ ಎರಡೂ ಬದಿಯ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ.
ವೈಟ್ಟಾಪಿಂಗ್ ಆಗಿರುವ ಒಂದು ಪಾರ್ಶ್ವದ ರಸ್ತೆಯ ಕಾಂಕ್ರೀಟ್ ಕ್ಯೂರಿಂಗ್ ಕೂಡಾ ಪೂರ್ಣಗೊಂಡಿದ್ದು, ಇಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೊಂದು ಬದಿಯ ರಸ್ತೆಯ ಕ್ಯೂರಿಂಗ್ ಬಾಕಿಯಿದೆ. ಅದಲ್ಲದೆ ರಸ್ತೆಯ ಇಕ್ಕೆಲಗಳಲ್ಲೂ ಒಳಚರಂಡಿ ಕಾಮಗಾರಿಯೂ ಪೂರ್ಣಗೊಂಡಿದೆ.
‘ಕುಡಿಯುವ ನೀರಿನ ಕೊಳವೆಮಾರ್ಗಗಳು, ಬೆಸ್ಕಾಂನ ವಿದ್ಯುತ್ ಮಾರ್ಗ, ಒಎಫ್ಸಿ ಕೇಬಲ್ಗಳಿಗೆ ಡಕ್ಟ್ಗಳ ಅಳವಡಿಕೆ, ಮಳೆ ನೀರು ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗಗಳ ಕೆಲಸಗಳು ಬಾಕಿ ಇವೆ. ಈ ಕಾಮಗಾರಿಗಳನ್ನು 40 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಕಾಂಕ್ರೀಟ್ನ ಕ್ಯೂರಿಂಗ್ ಪೂರ್ಣಗೊಂಡ ಕೂಡಲೆ ರಸ್ತೆಯ ಎರಡೂ ದಿಕ್ಕುಗಳಲ್ಲೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬಾಕಿ ಇರುವ ಇತರ ಕಾಮಗಾರಿಗಳನ್ನು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ತ್ವರಿತವಾಗಿ ಪೂರ್ಣಗೊಳಿಸ ಬೇಕು’ ಎಂದು ಗೌರವ್ ಗುಪ್ತ ಅವರು ಸೂಚಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.