ಬೆಂಗಳೂರು: ‘ಆನಂದ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನೀಡಿದ ಖಾತೆ ಸರಿಯಿಲ್ಲ. ಕಳ್ಳರ ಕೈಯಲ್ಲಿ ಕೀ ಕೊಟ್ಟಂತಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದವರು ಪಡೆಯುತ್ತಿರುವ ಮೀಸಲಾತಿ, ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲನೆ ಆಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕೆಪಿಸಿಸಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವಿಭಾಗ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಆನಂದ ಸಿಂಗ್ ನಮ್ಮ ಪಕ್ಷದಲ್ಲಿ ಶಾಸಕರಾಗಿದ್ದರು. ಸಚಿವರನ್ನಾಗಿ ಮಾಡಿರ
ಲಿಲ್ಲ. ಅರಣ್ಯ ಖಾತೆ ವಹಿಸಿಕೊಂಡಿರುವ ಅವರ ವಿರುದ್ಧ ಅರಣ್ಯ ಕಾಯ್ದೆ ಉಲ್ಲಂಘನೆ ಸಂಬಂಧಿಸಿದ 15ರಷ್ಟು ಪ್ರಕರಣಗಳಿವೆ’ ಎಂದರು.
‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದವರಿಗೆ ನೀಡಿರುವ ಮೀಸಲಾತಿ ರದ್ದು ಮಾಡಿ
ದರೆ ಮೂಲಭೂತ ಹಕ್ಕು ಕಿತ್ತು
ಕೊಂಡಂತಾಗುತ್ತದೆ. ದಲಿತರು, ಶೋಷಿತರ ಬಗ್ಗೆ ಬಿಜೆಪಿಯವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ತಕ್ಷಣ ಮರುಪರಿಶೀಲನೆ ಅರ್ಜಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ಸುಪ್ರೀಂ ಕೋರ್ಟ್ ತೀರ್ಪು ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ತಂದಿರುವ ಈ ತೀರ್ಪು ಬಂದು 10 ದಿನ ಕಳೆಯಿತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಯಾರೂ ಒಂದೇ ಒಂದು ಮಾತು ಆಡಿಲ್ಲ’ ಎಂದರು.
‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಜನರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆ
ಯುತ್ತದೆ. ಅಲ್ಲಿಗೆ ಮಾಧ್ಯಮದವರನ್ನು ಬಿಡಬೇಕು. ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಿಡುಗಡೆ ಮಾಡಿರುವುದು ಬಿಜೆಪಿಯ ಇಬ್ಬಗೆ ನೀತಿ’ ಎಂದೂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕಾಂಗ್ರೆಸ್ನಲ್ಲಿದ್ದಾಗ ಏಕೆ ವಿರೋಧಿಸಲಿಲ್ಲ?–ಸಿಂಗ್
‘ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗಲೂ ನನ್ನ ಮೇಲೆ ಆರೋಪ ಇತ್ತು. ನನ್ನನ್ನು ಆಗ ಯಾಕಾಗಿ ಪಕ್ಷಕ್ಕೆ ಸೇರಿಸಿಕೊಂಡರು? ಆಗಲೇ ಹೊರಗೆ ಹೋಗು ಅನ್ನಬೇಕಿತ್ತಲ್ಲವೇ?’ ಎಂದು ಅರಣ್ಯ ಸಚಿವ ಆನಂದ ಸಿಂಗ್ ಪ್ರಶ್ನಿಸಿದರು.
‘ಅರಣ್ಯ ನಾಶಕ್ಕೆಸಂಬಂಧಿಸಿದಂತೆ ಎಂಟು ವರ್ಷಗಳಿಂದ ತನಿಖೆ ನಡೆಯುತ್ತಿದೆ, ಆದರೆ ಯಾರೊಬ್ಬರೂ ತಪ್ಪಿತಸ್ಥರೆಂದು ಸಾಬೀತಾಗಿಲ್ಲ, ಹಲವು ಪ್ರಕರಣಗಳು ಖುಲಾಸೆಯಾಗಿವೆ. ನಾನು ಈಗಲೂ ನನ್ನ ಮೇಲಿನ ಚಾರ್ಜ್ಶೀಟ್ ಬಹಿರಂಗಪಡಿಸಲು ಸಿದ್ಧ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.