ವೈಟ್ಫೀಲ್ಡ್: ‘ನಗರದ ಪ್ರತಿ ಮನೆಗೆ ತೆರಳಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಬೇಕು ಮತ್ತು ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಮಹದೇವಪುರ ವಲಯದ ಕೊರೊನಾ ನಿಯಂತ್ರಣ ಉಸ್ತುವಾರಿಯೂ ಆಗಿರುವ ಸಚಿವರು,ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಮಹದೇವಪುರ ಬಿಬಿಎಂಪಿ ವಲಯ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಂಗಳೂರು ಪೂರ್ವ ತಾಲ್ಲೂಕಿನ ಮಹದೇವಪುರ ವಲಯದ 17 ವಾರ್ಡ್ಗಳು ಹಾಗೂ 11 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್-19 ನಿರ್ವಹಣಾ ಘಟಕ ಸ್ಥಾಪನೆ ಮಾಡುವುದರ ಜೊತೆಗೆ ಒಬ್ಬ ಅಧಿಕಾರಿಗೆ ಸಂಪೂರ್ಣ ಜವಾಬ್ದಾರಿ ನೀಡಬೇಕು ಎಂದರು.
ಕೊರೊನಾ ಸೊಂಕಿತರಿಗೆ ಶೀಘ್ರವಾಗಿ ದೊರಕುವಂತೆ ಪ್ರತಿ ವಾರ್ಡನಲ್ಲಿ ತಲಾ ಎರಡು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ಒಂದು ಹೆಚ್ಚುವರಿ ಆಂಬುಲೆನ್ಸ್ ಸೇವೆ ದೊರಕುವಂತಾಗಬೇಕು ಎಂದು ಸೂಚಿಸಿದರು.
ಕೊರೊನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣವನ್ನು ಪಡೆದರೆ ಯಾವುದೇ ಮುಲಾಜಿಲ್ಲದೆ ಆಸ್ಪತ್ರೆ ಪರವಾನಗಿ ರದ್ದು ಮಾಡಲಾಗುತ್ತದೆ ಎಂದೂ ಅವರು ಎಚ್ಚರಿಸಿದರು.
‘ಮಹದೇವಪುರ ವಲಯದಲ್ಲಿ ಕನಿಷ್ಠ 1 ಸಾವಿರ ಬೆಡ್ ಮತ್ತು 3 ಕ್ವಾರಂಟೈನ್ ಕೇಂದ್ರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಶಾಸಕ ಅರವಿಂದ ಲಿಂಬಾವಳಿ, ‘ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮನೆಗಳಿಗೆ ಬೇರೆ ಗ್ರಾಮಗಳಿಂದ ಬರುವವರನ್ನು ತಪಾಸಣೆ ನಡೆಸಲು ಆರೋಗ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು’ ಎಂದರು.
ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್, ವಿಶೇಷ ಆಯುಕ್ತ ರಣದೀಪ್, ಮಹದೇವಪುರ ವಲಯ ಕೋವಿಡ್– 19 ಸಂಯೋಜಕರಾದ ಮಂಜುಳಾ, ಜಂಟಿ ಆಯುಕ್ತ ವೆಂಕಟಾಚಲಪತಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.