ನಗರದಲ್ಲಿ 50 ಜಾನಪದ ಕಲಾ ತಂಡಗಳಿದ್ದು, ಅವುಗಳಿಗೆ ಕಲಾ ತಂಡಗಳ ಪ್ರಾಯೋಜಕತ್ವ ಯೋಜನೆಯಡಿ ಪಾವತಿಸಬೇಕಾದ ₹ 40 ಲಕ್ಷವನ್ನು ಇಲಾಖೆ ಬಾಕಿ ಉಳಿಸಿಕೊಂಡಿದೆ. ಅನುದಾನದ ಕೊರತೆಯಿಂದ ಏಪ್ರಿಲ್ ತಿಂಗಳವರೆಗೂ ಕಲಾ ತಂಡಗಳನ್ನು ಪ್ರಾಯೋಜಿಸುವುದಿಲ್ಲ. ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ, ಸಂಸ ಬಯಲು ರಂಗ ಮಂದಿರಗಳಲ್ಲಿ ಮಾ.31ರವರೆಗೆ ಮುಂಗಡ ಬುಕ್ಕಿಂಗ್ಗಳನ್ನು ರದ್ದು ಮಾಡಲಾಗಿದೆ. ಬಿಬಿಎಂಪಿ ಅಧೀನದಲ್ಲಿರುವ ಪುರಭವನಕ್ಕೂ ಬೀಗ ಹಾಕಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬಿ.ಪಿ. ವಾಡಿಯಾ, ಚೌಡಯ್ಯ ಸ್ಮಾರಕ ಭವನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.