ಬೆಂಗಳೂರು: ರಾತ್ರಿ ಕರ್ಫ್ಯೂ ವಿಧಿಸಿರುವ ಏಳು ಜಿಲ್ಲೆಗಳ ನಗರಗಳು ಮತ್ತು ಮಣಿಪಾಲದ ಕೈಗಾರಿಕೆಗಳ ನೌಕರರು ಕರ್ಫ್ಯೂ ಅವಧಿಯಲ್ಲಿ (ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ) ಓಡಾಡುವ ಸಂದರ್ಭದಲ್ಲಿ ತಮ್ಮ ಕಂಪನಿ ನೀಡಿದ ಗುರುತಿನ ಚೀಟಿ ಹೊಂದಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೈಗಾರಿಕೆಗಳ ಸುಗಮ ಕಾರ್ಯನಿರ್ವಹಣೆ ಮತ್ತು ನೌಕರರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ನೌಕರರನ್ನು ಕರೆದೊಯ್ಯುವ ವಾಹನಗಳು ಆಯಾ ಕಂಪನಿಯ ಅಧಿಕೃತ ಪತ್ರ ಹೊಂದಿರಬೇಕು. ಅಲ್ಲದೆ, ಸಂಚಾರದ ವೇಳೆ ನೌಕರರು ಮತ್ತು ವಾಹನಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.
ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ– ಮಣಿಪಾಲ, ಬೀದರ್, ಕಲಬುರ್ಗಿ ಮತ್ತು ತುಮಕೂರು ನಗರದಲ್ಲಿ ಏ.10ರಿಂದ 20ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ.