ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ್ಡೇನಹಳ್ಳಿ ಬಯಲು ಚಿತಾಗಾರ ಸ್ಥಗಿತ

Last Updated 9 ಜೂನ್ 2021, 18:54 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಾವು ಸತತವಾಗಿ ಏರುತ್ತಿದ್ದ ಸಂದರ್ಭದಲ್ಲಿ ಶವಗಳ ದಹನಕ್ಕೆ ನಗರದ ಹೊರವಲಯದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದ ಗಿಡ್ಡೇನಹಳ್ಳಿ ಬಯಲು ಚಿತಾಗಾರವನ್ನು ಮುಚ್ಚಲಾಗಿದೆ. ಕೋವಿಡ್‌ ಸಾವುಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಇದಕ್ಕೆ ಕಾರಣ.

ಎರಡು ದಿನಗಳ ಹಿಂದೆಯೇ ಈ ಸ್ಮಶಾನವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿನ ಬಯಲು ಚಿತಾಗಾರವನ್ನು ಬಳಸಲಾಗುತ್ತಿದ್ದು, ಇಲ್ಲಿಯೂ ದಿನಕ್ಕೆ ಬೆರಳೆಣಿಕೆಯಷ್ಟು ಶವಗಳು ಬರುತ್ತಿವೆ.

’ಮೂರು ದಿನಗಳಿಂದ ಐದು, ಆರು ಶವಗಳು ಬರುತ್ತಿದ್ದವು. ಮಂಗಳವಾರ ಮೂರು ಶವಗಳು ಬಂದಿದ್ದವು. ಬುಧವಾರ ಮಧ್ಯಾಹ್ನದವರೆಗೂ ಒಂದೂ ಬಂದಿರಲಿಲ್ಲ. ಮೊದಲು 50 ಶವಗಳ ದಹನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈಗ 28 ಶವಗಳ ದಹನಕ್ಕೆ ಆಗುವಷ್ಟು ಸ್ಥಳವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ’ ಎಂದು ಕುರುಬರಹಳ್ಳಿ ಸ್ಮಶಾನದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ಕುರುಬರಹಳ್ಳಿಯಲ್ಲಿ ದಿನಕ್ಕೆ ಎರಡು–ಮೂರು ಶವಗಳು ಮಾತ್ರ ಬರುತ್ತಿದ್ದರೂ ಸ್ಥಳದಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಕಂದಾಯ ಇಲಾಖೆಯ ಇಬ್ಬರು, ಬಿಬಿಎಂಪಿಯ ಮೂವರು ಸಿಬ್ಬಂದಿಯಲ್ಲದೆ, ಶವ ಸುಡುವ ಇಬ್ಬರು ಸ್ಥಳದಲ್ಲಿದ್ದರು. ಇಬ್ಬರು ಪೊಲೀಸರೂ ಇದ್ದರು.

‘ಗಿಡ್ಡೇನಹಳ್ಳಿಯಲ್ಲಿನ ಬಯಲು ಚಿತಾಗಾರವನ್ನು ಸ್ಥಗಿತಗೊಳಿಸಲಾಗಿದ್ದು, ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ’ ಎಂದು ಬೆಂಗಳೂರು ಉತ್ತರ ತಹಶೀಲ್ದಾರ್ ರಂಗನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT