ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ಸಾಗಾಟ: ₹73 ಲಕ್ಷ ಜಪ್ತಿ

ಹಣವನ್ನು ಹೊರ ರಾಜ್ಯಕ್ಕೆ ಸಾಗಿಸಲು ಸಿದ್ಧತೆ ನಡೆಸಿದ್ದ ಮೂವರ ಬಂಧನ
Last Updated 11 ಅಕ್ಟೋಬರ್ 2020, 21:37 IST
ಅಕ್ಷರ ಗಾತ್ರ

ಬೆಂಗಳೂರು: ದಾಖಲೆಗಳಿಲ್ಲದೆ ಲಕ್ಷಗಟ್ಟಲೆ ಹಣ ಸಾಗಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳ‌ನ್ನು ಭೇದಿಸಿರುವ ಹಲಸೂರು ಗೇಟ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ₹73 ಲಕ್ಷ ಜಪ್ತಿ ಮಾಡಿದ್ದಾರೆ.

ಕಬ್ಬನ್ ಪೇಟೆಯ ಗಣೇಶ್ (40), ನಗರ್ತ ಪೇಟೆಯ ಮೋಹನ್ ಲಾಲ್ (41) ಹಾಗೂ ವಿಪುಲ್ ಜೈನ್ (38) ಬಂಧಿತರು.

ದಾಖಲೆಗಳಿಲ್ಲದ ಲಕ್ಷಾಂತರ ಹಣವನ್ನು ಆರೋಪಿಗಳು ಹೊರ ರಾಜ್ಯಕ್ಕೆ ಸಾಗಿಸಲು ಶನಿವಾರ ರಾತ್ರಿ ಸಿದ್ಧತೆ ಮಾಡಿಕೊಂಡಿದ್ದರು. ಈ ಕುರಿತ ಮಾಹಿತಿ ಆಧರಿಸಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ಕೈಗೊಂಡಿದ್ದರು. ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿ ಗಣೇಶ್, ನಗರ್ತಪೇಟೆಯಲ್ಲಿ ಮೋಹನ್ ಲಾಲ್ ಮತ್ತು ಅಣ್ಣಯ್ಯಪ್ಪನ ಗಲ್ಲಿಯಲ್ಲಿ ವಿಪುಲ್ ಜೈನ್‍ನನ್ನು ಹಣದ ಸಮೇತ ಪೊಲೀಸರು ಬಂಧಿಸಿದ್ದಾರೆ.

‘ಮೂವರೂ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿದ್ದರು. ದಾಖಲೆಗಳಿಲ್ಲದ ಹಣ ವನ್ನು ಹೊರ ರಾಜ್ಯಕ್ಕೆ ಪ್ರತ್ಯೇಕವಾಗಿ ಕಳುಹಿಸಲಾಗುತ್ತಿತ್ತು. ಈ ಹಿಂದೆಯೂ ಹಲವು ಬಾರಿ ವಿವಿಧೆಡೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ವಂಚನೆ-ದೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮಗೆ ಸೇರಬೇಕಾದ ಸ್ವತ್ತನ್ನು ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ವಿಕ್ರಮ್ ಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಐವರ ವಿರುದ್ಧ ಪ್ರವೀಣ್ ಎಂಬುವರು ಕೊಡಿ ಗೇಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಹೆಬ್ಬಾಳದ ಸಮೀಪ 11 ಅಂತಸ್ತಿನ ವಾಣಿಜ್ಯ ಬಹುಮಹಡಿ ಕಟ್ಟಡ ನಿರ್ಮಿಸಲು ವಿಕ್ರಮ್ ಸ್ಟ್ರಕ್ಚರ್ಸ್ ಸಂಸ್ಥೆಯೊಂದಿಗೆ 2013ರಲ್ಲಿ ಜಂಟಿ ಸಹಭಾಗಿತ್ವದ ಅಭಿವೃದ್ಧಿ ಕರಾರು ಪತ್ರ ಮಾಡಿಸಿಕೊಡಲಾಗಿತ್ತು.

‘ಅದರಂತೆ ಕಟ್ಟಡದಲ್ಲಿ ಸಂಸ್ಥೆಗೆ ಹಾಗೂ ಮಾಲೀಕರಾದ ನಮಗೆ ಶೇ 50ರಷ್ಟು ಭಾಗ ಸಮಾನವಾಗಿ ಹಂಚಿಕೆಯಾಗುವಂತೆ ಒಪ್ಪಂದವಾಗಿತ್ತು. ಆದರೆ, ಈ ವರ್ಷ ಕೊರೊನಾ ಕಾರಣದಿಂದ ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ದೂರಿನಲ್ಲಿ ಪ್ರವೀಣ್ ತಿಳಿಸಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದಾಗ, ಕಂಪನಿಗೆ ಸೇರಿರುವ ಜಾಗಕ್ಕಿಂತ ನಮಗೆ ಸೇರಿರುವ ಜಾಗವನ್ನೂ ಹೆಚ್ಚುವರಿಯಾಗಿ ಸೇರಿಸಿಕೊಂಡು, ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಈ ಸ್ವತ್ತಿಗೆ ನಕಲಿ ಖಾತೆಗಳನ್ನೂ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದು, ಈ ಬಗ್ಗೆ ವಿಚಾರಿಸಲು ಹೋದ ವೇಳೆ ವಿಕ್ರಮ್ ಸ್ಟ್ರಕ್ಚರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಪ್ರಭಾಕರ್ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಇದರಲ್ಲಿ ಭಾಗಿಯಾಗಿರುವ ಸಂಸ್ಥೆಯ ಮಂಜುನಾಥ್ ರವೀಂದ್ರ, ಐಶ್ವರ್ಯ, ನವೀನ್ ಪುರುಷೋತ್ತಮ್ ಹಾಗೂ ಆದಿತ್ಯ ರೆಡ್ಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ನಿವೇಶನ ಕೊಡಿಸುವುದಾಗಿ ₹9 ಲಕ್ಷ ವಂಚನೆ

ರೈಲ್ವೆ ಕೋ-ಆಪರೇಟಿವ್ ಸೊಸೈಟಿಯಿಂದ ನಿವೇಶನ ಕೊಡಿಸುವುದಾಗಿ ರೈಲ್ವೆ ಇಲಾಖೆಯ ನೌಕರ ಬಾಬು ಎಂಬಾತ ₹9 ಲಕ್ಷ ಪಡೆದು ವಂಚಿಸಿದ ಬಗ್ಗೆ ಚೆನ್ನೈ ರೈಲ್ವೆ ನಿಲ್ದಾಣದ ಉಪ ವಾಣಿಜ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಇಲ್ಲಿನ ಸಿಟಿ ರೈಲ್ವೆ ಠಾಣೆಗೆ ದೂರು ನೀಡಿದ್ದಾರೆ

‘2014ರಲ್ಲಿ ಸೆಂಥಿಲ್ ಅವರು ಬೆಂಗಳೂರು ಸಿಟಿ ರೈಲು ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಬಾಬು, ನಿವೇಶನ ಕೊಡಿಸುವುದಾಗಿ ನಂಬಿಸಿ, ಎರಡು ಕಂತುಗಳಲ್ಲಿ ₹9 ಲಕ್ಷ ಪಡೆದಿದ್ದ. ಇದಾದ ಕೆಲ ತಿಂಗಳಲ್ಲೇ ಸೆಂಥಿಲ್ ಅವರಿಗೆ ಹುಬ್ಬಳ್ಳಿಗೆ ವರ್ಗಾವಣೆಯಾಗಿತ್ತು. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿದೆ. ಇನ್ನೂ 3ರಿಂದ 4 ವರ್ಷ ಆಗಬಹುದು’ ಆರೋಪಿ ಹೇಳಿದ್ದ. ಆತನ ಮೇಲೆ ಅನುಮಾನದಿಂದ ಅಧಿಕಾರಿಗಳನ್ನು ಸಲಹೆ ಕೇಳಿದಾಗ ಹಣ ವಾಪಸ್ ಪಡೆಯಲು ಸೆಂಥಿಲ್‍ಗೆ ಸೂಚಿಸಿದ್ದರು.’

‘ಇದೇ ವೇಳೆ ಸೇಂಥಿಲ್‌ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿದ್ದರಿಂದ ಅಲ್ಲಿಗೇ ಬಂದು ದಾಖಲೆಗಳನ್ನು ನೀಡುವುದಾಗಿಬಾಬು ಹೇಳಿದ್ದ. ಬಳಿಕ ಆತನ ಸುಳಿವೇ ಇರಲಿಲ್ಲ. ಹಾಗಾಗಿ, ತಲೆಮರೆಸಿಕೊಂಡಿರುವ ಆರೋಪಿ ಬಾಬು ವಿರುದ್ಧಸೆಂಥಿಲ್ ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ–ಅತ್ತೆಯಿಂದ ವರದಕ್ಷಿಣೆ ಕಿರುಕುಳ: ದೂರು

ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ, ಮಗುವಿನೊಂದಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿ ನೊಂದ ಮಹಿಳೆ ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಹೈದರಾಬಾದ್‌ನ ಟೆಕಿ ಹರಿಪ್ರಸಾದ್ ತೋಟಾ ಅವರನ್ನು ಎರಡು ವರ್ಷದ ಹಿಂದೆ ಮಹಿಳೆ
ವಿವಾಹವಾಗಿದ್ದರು. ದಂಪತಿ ಕೆಲವು ಸಮಯ ಅಮೆರಿಕದಲ್ಲಿ ಇದ್ದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತಿ ಹಾಗೂ ಕುಟುಂಬದವರು ಇತ್ತೀಚೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮೂರು ತಿಂಗಳಿನಿಂದ ಪತಿ ಸಂಪರ್ಕಕ್ಕೆ ಸಿಗದೆ ಮನೆ ತೊರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಇತ್ತ ಕಿರುಕುಳ ಮುಂದುವರಿಸಿದ್ದ ಕುಟುಂಬ, ಮಹಿಳೆ ಹಾಗೂ ಮಗುವಿಗೆ ಊಟ ಸಹ ನೀಡದೆ ಮನೆಯಿಂದ ಹೊರಹಾಕಿದ್ದಾರೆ. ತಾಯಿ ಮಗುವಿನೊಂದಿಗೆ ರಾತ್ರಿಯಿಡೀ ಮನೆಯ ಹೊರಗೆ ಕಳೆದಿದ್ದಾರೆ’ ಎಂದು ದೂರಿದ್ದಾರೆ.

ವಿಮೆ ಹೆಸರಿನಲ್ಲಿ ವೃದ್ಧನಿಗೆ ₹2 ಲಕ್ಷ ವಂಚನೆ

ಜೀವ ವಿಮಾ ಕಂಪನಿಯೊಂದರ ಹೆಸರಿನಲ್ಲಿ ವೃದ್ಧರೊಬ್ಬರಿಗೆ ₹2 ಲಕ್ಷ ವಂಚಿಸಿರುವ ಘಟನೆ ನಡೆದಿದ್ದು, ವಂಚನೆಗೊಳಗಾದ ವ್ಯಕ್ತಿ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.

ಆದಿತ್ಯ ಎಂಬಾತ ಪ್ರತಿಷ್ಠಿತ ವಿಮಾ ಕಂಪನಿಯ ಪ್ರತಿನಿಧಿ ಎಂದು ವಿಜಯನಗರ ನಿವಾಸಿ ನಾಗೇಂದ್ರ ಎಂಬ ವೃದ್ಧನನ್ನು ಪರಿಚಯ ಮಾಡಿಕೊಂಡಿದ್ದ. ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದರೆ ಶೇ 12.5ರಂತೆ ಬಡ್ಡಿ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಸುವುದಾಗಿ ಆಮಿಷವೊಡ್ಡಿ, ವೃದ್ಧನಿಂದ ₹2 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವೃದ್ಧನಿಂದ ₹2 ಲಕ್ಷದ ಚೆಕ್ ಪಡೆದಿದ್ದ ಆದಿತ್ಯ, ಹಣ ಡ್ರಾ ಮಾಡಿಕೊಂಡು ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕುರಿತು ಮಾಹಿತಿ ಪಡೆಯಲು ಸದರಿ ವಿಮಾ ಕಂಪನಿಗೆ ಭೇಟಿ ನೀಡಿದಾಗ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಅಂತಹ ವ್ಯಕ್ತಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಂಚನೆಯಾಗಿರುವುದು ತಿಳಿದು ವೃದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT