ಬೆಂಗಳೂರು: ಕುಮಾರಸ್ವಾಮಿ ಠಾಣೆ ವ್ಯಾಪ್ತಿಯ ಯಲಚೇನಹಳ್ಳಿಯ ಮನೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
‘ಗೌತಮ್, ಮಂದಿಲ್ ಹಾಗೂ ಸೋನಿ ಗಾಯಗೊಂಡವರು. ತೀವ್ರ ಸುಟ್ಟ ಗಾಯಗಳಾಗಿರುವ ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿಹಾರದ ಗೌತಮ್ ಹಾಗೂ ಮಂದಿಲ್ ವರ್ಷದ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಏಜೆನ್ಸಿ ಮೂಲಕ ಭದ್ರತಾ ಸಿಬ್ಬಂದಿ ಆಗಿ ಕೆಲಸ ಆರಂಭಿಸಿದ್ದರು. ಯಲಚೇನಹಳ್ಳಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಅವರ ಪಕ್ಕದ ಮನೆಯಲ್ಲೇ ಕುಟುಂಬದ ಜೊತೆ ಮಹಿಳೆ ಸೋನಿ ನೆಲೆಸಿದ್ದರು’ ಎಂದು ತಿಳಿಸಿದರು.
‘ಸೋನಿ ಅವರು ಬೆಳಿಗ್ಗೆ ಬಟ್ಟೆ ಒಣ ಹಾಕಲೆಂದು ಹೊರಗೆ ಬಂದಿದ್ದರು. ಇದೇ ಸಂದರ್ಭದಲ್ಲೇ ಕೊಠಡಿಯಲ್ಲಿ ಸ್ಫೋಟ ಸಂಭವಿಸಿತ್ತು. ಕೊಠಡಿಯಲ್ಲಿದ್ದ ಗೌರಮ್, ಮಂದಿಲ್ ಹಾಗೂ ಹೊರಗೆ ಇದ್ದ ಸೋನಿ ಅವರಿಗೆ ಬೆಂಕಿ ತಗುಲಿ ಗಾಯವಾಯಿತು’ ಎಂದೂ ಹೇಳಿದರು.
ಮನೆಯಲ್ಲಿ ಪರಿಶೀಲನೆ: ‘ಸ್ಫೋಟ ಸಂಭವಿಸುತ್ತಿದ್ದಂತೆ ಜೋರಾದ ಶಬ್ದ ಬಂದಿತ್ತು. ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
‘ಕೊಠಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಇತ್ತು. ಅದೇ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕೊಠಡಿಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟಿದ್ದು, ಕಿಟಕಿಗಳು ಒಡೆದಿವೆ’ ಎಂದು ಹೇಳಿದರು.