ಯಲಹಂಕ: ಸಂದೀಪ್ ಉನ್ನಿಕೃಷ್ಣನ್ ವೃತ್ತದ ಬಳಿಯಿರುವ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಪೀಠ ಶಾಲೆಯ ಮಕ್ಕಳು, ಜಾಗೃತಿ ಮೂಡಿಸುವ ಹಲವು ಗೀತೆಗಳಿಗೆ ನೃತ್ಯ ಪ್ರಸ್ತುತಪಡಿಸಿದರು.
ವಿವಿಧ ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದ ಮಕ್ಕಳು, ಭಾರತದ ಸಂಸ್ಕೃತಿ, ದೇಶಭಕ್ತಿ ಹಾಗೂ ಪರಿಸರ ಕುರಿತ ಗೀತೆಗಳಿಗೆ ನೃತ್ಯಮಾಡುವ ಮೂಲಕ ಜನರ ಗಮನ ಸೆಳೆದರು. ಭಾಷಣ ಮತ್ತು ಬೀದಿನಾಟಕದ ಜೊತೆಗೆ ರೈತರು ಹಾಗೂ ಸೈನಿಕರ ಸಮಸ್ಯೆಗಳನ್ನು ಹರಿಕಥೆಯ ಮೂಲಕ ಪ್ರಸ್ತುತಪಡಿಸಿದರು.
ಕನ್ನಡ ಶಿಕ್ಷಕಿ ಶಶಿಕಲಾ ಎಂ.ವಿ. ಮಾತನಾಡಿ, ‘ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ದೇಶಭಕ್ತಿ, ರೈತರ ಮತ್ತು ಸೈನಿಕರ ಸಮಸ್ಯೆಗಳು, ಭಾರತದ ಕಲೆ, ಸಂಸ್ಕೃತಿ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲು ಇಂತಹ ಗೀತೆಗಳನ್ನು ಆಯ್ಕೆಮಾಡಿಕೊಂಡು ನೃತ್ಯದ ಮೂಲಕ ಪ್ರಸ್ತುತಪಡಿಸಲಾಗಿದೆ’ ಎಂದು ತಿಳಿಸಿದರು.
ಶಾಲೆಯ ನಿರ್ದೇಶಕಿ ಸುಶೀಲ ಸಂತೋಷ್, ಪ್ರಾಂಶುಪಾಲರಾದ ರೂಪಾ, ಮುಖ್ಯಶಿಕ್ಷಕಿ ರಿಚಾ ಕಾರಬನ್ ಉಪಸ್ಥಿತರಿದ್ದರು.