‘ಡಿಎಚ್ ಬೆಂಗಳೂರು 2040 ಶೃಂಗ’ದಲ್ಲಿ ಭಾಗವಹಿಸಿದ್ದ ಸಭಾಸದರು
ಪ್ರಜಾವಾಣಿ ಚಿತ್ರ
ಎ.ಐ. (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಕ್ಕೆ ಪೂರಕವೇ ಹೊರತು ಅದೇ ಎಲ್ಲ ಅಲ್ಲ. ಶಿಕ್ಷಣವೇ ಎಲ್ಲದಕ್ಕಿಂತ ಮುಖ್ಯ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಎಲ್ಲ ಕಡೆಯಿಂದ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಈ ಪ್ರತಿಭೆಗಳಿಗೆ ಕೌಶಲವೂ ದೊರೆತರೆ ಮಾದರಿ ಬೆಂಗಳೂರು ನಿರ್ಮಾಣಗೊಳ್ಳಲಿದೆ.
–ಶರತ್ ಕುಮಾರ್ ಬಚ್ಚೇಗೌಡ ಕಿಯೋನಿಕ್ಸ್ ಅಧ್ಯಕ್ಷ
ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವ ಮೂಲಕ ಜನರಿಗೆ ಮಾಹಿತಿ ದೊರೆಯುವಂತೆ ಮಾಡುವುದು ಉತ್ತಮ ವಿಚಾರ. ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳಲು ಜನರಿಗೆ ಹಿಂಜರಿಕೆ ಇರುವುದಿಲ್ಲ. ಆದರೆ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನರು ಮುಂದಾಗುವುದಿಲ್ಲ. ನಾವು ಅದಕ್ಕಾಗಿ ಜಿಲ್ಲೆಗಳಲ್ಲಿ ಮಾತ್ರವಲ್ಲ ಪ್ರತಿ ತಾಲ್ಲೂಕುಗಳಲ್ಲಿ ಗ್ರಾಮಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಚಿಕಿತ್ಸೆ ದೊರೆಯುವಂತೆ ಮಾಡಿದ್ದೇವೆ.
–ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಜಗತ್ತಿನ ಎಲ್ಲ ಮಹಾನ್ ನಗರಗಳಲ್ಲಿ ವಾಹನದಟ್ಟಣೆಯ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂಬಂತೆ ನಾವು ಮಾತನಾಡುತ್ತಿದ್ದೇವೆ. 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಕಡಿಮೆ ಜನಸಂಖ್ಯೆ ಇರುವ ನಗರಗಳನ್ನು ಹೋಲಿಸಿ ನೋಡಬಾರದು. ವಾಹನದಟ್ಟಣೆಯನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಸುರಂಗ ಮಾರ್ಗ ಸಹಿತ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಬಿಡಿಎ ಬಿಬಿಎಂಪಿಯಂಥ ಸಂಸ್ಥೆಗಳು ಮೂಲಸೌಕರ್ಯಗಳನ್ನು ಕಲ್ಪಿಸುತ್ತಿವೆ.