ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ತಪ್ಪು ಮಾಹಿತಿ ನೀಡುತ್ತಿದ್ದ ಚಾಲಕ ಮುನೇಗೌಡ: RTO

ಸಾರಿಗೆ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತು: ದೇವನಹಳ್ಳಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸ್ಪಷ್ಟನೆ
Published 12 ಫೆಬ್ರುವರಿ 2024, 15:11 IST
Last Updated 12 ಫೆಬ್ರುವರಿ 2024, 15:11 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಬಂಧನಕ್ಕೆ ಒಳಗಾಗಿರುವ ಮುನೇಗೌಡ ಅವರು ಪ್ರಧಾನಿ, ರಾಷ್ಟ್ರಪತಿಯಿಂದ ಹಿಡಿದು ಎಲ್ಲರಿಗೂ ತಪ್ಪು ಮಾಹಿತಿಯ ಅರ್ಜಿ ಬರೆದು ದಾರಿತಪ್ಪಿಸುತ್ತಿದ್ದರು ಎಂದು ದೇವನಹಳ್ಳಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಡಿ ಮುನೇಗೌಡ (50) ಅವರನ್ನು ಪೊಲೀಸರು ಬಂಧಿಸಿದ್ದರು.

‘ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ್ದರೂ ಅಧಿಕಾರಿಗಳು ಚಾಲನಾ ಪರವಾನಗಿ (ಡಿಎಲ್‌) ಒದಗಿಸಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡು ಮಾತನಾಡಿದೆ’ ಎಂದು ಪೊಲೀಸರಿಗೆ ಮುನೇಗೌಡ ಹೇಳಿಕೆ ನೀಡಿದ್ದರು.

ಸಾರಿಗೆ ಅಧಿಕಾರಿಗಳಿಂದ ಯಾವುದೇ ಲೋಪವಾಗಿಲ್ಲ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಸಾರಿಗೆ ಆಯುಕ್ತರಿಗೆ ಬರೆದ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಪತ್ರದಲ್ಲೇನಿದೆ?

ವಾಹನಗಳ ‍ಪರವಾನಗಿ ನವೀಕರಣ ಮಾಡುವಂತೆ 2018ರಲ್ಲಿ ಅರ್ಜಿ ಸಲ್ಲಿಸಿದ್ದರು. ಮೂಲ ಚಾಲನಾ ಪರವಾನಗಿ ಕಳೆದುಕೊಂಡು ಬದಲಿ (ಡೂಪ್ಲಿಕೇಟ್‌) ಚಾಲನಾ ಪರವಾನಗಿ ಪಡೆದಿದ್ದ ಮುನೇಗೌಡ ಅದನ್ನು ಇಲಾಖೆಗೆ ಹಿಂತಿರುಗಿಸಿದ್ದರು. ಮೂಲ ಪರವಾನಗಿ ಒದಗಿಸುವಂತೆ ಪತ್ರ ಬರೆದಿದ್ದರು. ಬದಲಿ ಚಾಲನ ಪತ್ರವನ್ನು ಬಳಸುವುದಕ್ಕೆ ತೊಂದರೆ ಇರುವುದಿಲ್ಲ ಎಂದು ಮುನೇಗೌಡರಿಗೆ ತಿಳಿವಳಿಕೆ ನೀಡಲಾಗಿತ್ತು. ವಾಹನ ಪರವಾನಗಿ ನವೀಕರಿಸಿ ಕಾರ್ಡ್ ಕಳುಹಿಸಲಾಗಿತ್ತು. 

25 ವರ್ಷಗಳಿಂದ ವಾಸ ಇಲ್ಲದ ವಿಳಾಸವನ್ನು ನೀಡಿದ್ದರು. ಆದರೂ ಅವರಿಗೆ ಪೋಸ್ಟ್‌ ಮ್ಯಾನ್‌ ಕರೆ ಮಾಡಿ ಮುನೇಗೌಡ ತಿಳಿಸಿದ ವ್ಯಕ್ತಿಯ ಮೂಲಕ ಪರವಾನಗಿ ಲಕೋಟೆ ತಲುಪಿಸಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT