ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಿಬಿಎಂಪಿ ಪ್ರಸ್ತಾಪಿ ಸಿರುವ ಎಲಿವೇಟೆಡ್ ಮೇಲ್ಸೇತುವೆ ಗಳನ್ನು ಮರು ಚಿಂತನೆ ನಡೆಸಿ, ವಿಸ್ತೃತವಾದ ಯೋಜನಾ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಐಎಸ್ಇಸಿ ವರದಿಯಲ್ಲಿ ಸಲಹೆ ನೀಡಲಾಗಿದೆ.
ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದದ ಐಎಸ್ಇಸಿ, ‘ಪರಿಸರ ಸಮಸ್ಯೆಗಳು ಮತ್ತು ದಟ್ಟಣೆ: ಬೆಂಗಳೂರು ಅಭಿವೃದ್ಧಿಗೆ ಸುಸ್ಥಿರ ಪರಿಹಾರಗಳ ವಿಕಸನ’ ಎಂಬ ಅಧ್ಯಯನ ವರದಿಯಲ್ಲಿ ಜಂಕ್ಷನ್ಗಳಿಗೆ ಅನುಗುಣವಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಸಲಹೆ ನೀಡಲಾಗಿದೆ.
ಬಿಬಿಎಂಪಿ ಪ್ರಸ್ತಾಪಿ, ಡಿಪಿಆರ್ ಸಿದ್ಧಗೊಳಿಸಿರುವ ಕನಕಪುರ ರಸ್ತೆಯಿಂದ ಬನಶಂಕರಿವರೆಗೆ ಎಲಿವೇಟೆಡ್ ರಸ್ತೆ ಯನ್ನು ನಿರ್ಮಿಸಬಹುದು. ಕನಕಪುರ ರಸ್ತೆಯಿಂದ ಬನಶಂಕರಿ ಟಿಟಿಎಂಸಿ ಮತ್ತು ಇಳಿಯಾಸನಗರದಿಂದ ಜೆಪಿ ಸಾರಕ್ಕಿರಸ್ತೆ ಸಂಪರ್ಕಿಸುವ ಎಲೆವೇಟೆಡ್ ಮೇಲ್ಸೇತುವೆಗಳನ್ನು ಸಾರಕ್ಕಿ ಜಂಕ್ಷನ್ ನಿಂದ ನಿರ್ಮಿಸಬಹುದು ಎಂದು ವರದಿ ಹೇಳಿದೆ.
ಗೊರಗುಂಟೆಪಾಳ್ಯ ಜಂಕ್ಷನ್ ಸುತ್ತ ಮುತ್ತ ಮಾರ್ಗ ಬದಲಾಯಿಸು ವುದರಿಂದ ಶೇ 23 ರಷ್ಟು ದಟ್ಟಣೆ ಕಡಿಮೆ ಯಾಗುತ್ತದೆ. ಜೊತೆಗೆ ಬಿಬಿಎಂಪಿ ಪ್ರಸ್ತಾಪಿಸಿರುವ ಎಲಿವೇಟೆಡ್ ರಸ್ತೆ ಮತ್ತು ಮೇಲ್ಸೇತುವೆಗಳ ವಿವರಗಳನ್ನು ಡಿಪಿಆರ್ ಮರು ಪರಿಶೀಲಿಸಿದ ನಂತರ ಅನುಷ್ಠಾನ ಗೊಳಿಸಬೇಕು. ಮ್ಯಾನುಯಲ್ ಟ್ರಾಫಿಕ್ ಸಿಗ್ನಲ್ನಿಂದ ದಟ್ಟಣೆಗೆ ಅನುಗುಣವಾಗಿ ಚಾಲಿತವಾಗುವ ಅಡಾಪ್ಟೀವ್ ಟ್ರಾಫಿಕ್ ಸಿಗ್ನಲ್ ಅಳವಡಿಸಿಕೊಳ್ಳುವುದರಿಂದ ಸಂಚಾರ ಸಾಕಷ್ಟು ಸುಗಮವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಡೇರಿ ವೃತ್ತದಲ್ಲಿ ₹8 ಲಕ್ಷ ವೆಚ್ಚದಲ್ಲಿ ಎಲಿವೇಟೆಡ್ ವಾಕ್ವೇ, ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಇಂಟಿಗ್ರೇಟೆಡ್ ಎಲಿವೇಟೆಡ್ ವಾಕ್ವೇಸ್, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಎಲಿವೇಟೆಡ್ ವಾಕ್ವೇ, ಕುಮಾರಸ್ವಾಮಿ ಲೇಔಟ್ ಜಂಕ್ಷನ್ನಲ್ಲಿ ಹೊರ ವರ್ತುಲ ರಸ್ತೆ ಮೂಲಕ ದಯಾ ನಂದ ಸಾಗರ ಕಾಲೇಜು ರಸ್ತೆ ಮತ್ತು ಬನಶಂಕರಿ ಟಿಟಿಎಂಸಿ ರಸ್ತೆಯನ್ನು ಸಂಪರ್ಕಿಸುವಂತೆ ‘ಸಿ– ಆಕಾರದ ಎಲಿವೇಟೆಡ್ ಸ್ಕೈವಾಕ್ ಅನ್ನು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಬಹುದು ಎಂದಿದೆ.
ಟಿನ್ ಫ್ಯಾಕ್ಟರಿ ಜಂಕ್ಷನ್ನಲ್ಲಿರುವ ಸ್ಕೈವಾಕ್ ಹಾಗೂ ಬಿಎಂಆರ್ಸಿಎಲ್ ಹೊಸದಾಗಿ ನಿರ್ಮಿಸುತ್ತಿರುವ ಸ್ಕೈವಾಕ್ನಲ್ಲೇ ಪಾದಚಾರಿಗಳು ಓಡಾಡಬೇಕು. ಇಲ್ಲದಿದ್ದರೆ ದಂಡ ವಿಧಿಸುವ ‘ಜೇವಾಕ್ ಫೈನ್ಸ್’ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರು ಅನುಷ್ಠಾನಗೊಳಿಸಬೇಕು. ಬೀದಿ ಬದಿ ವ್ಯಾಪಾರಿಗಳು ನಿಯಂತ್ರಿಸುವುದರಿಂದ ಸಂಚಾರ ಸುಗಮವಾಗುತ್ತದೆ.
ಹೆಬ್ಬಾಳ ಜಂಕ್ಷನ್ನಲ್ಲಿ ಉತ್ತಮ ಪಾದಚಾರಿ ಸೌಲಭ್ಯ ಕಲ್ಪಿಸಬೇಕು. ಜಂಕ್ಷನ್ ಅನ್ನು ಪ್ರಸ್ತುತ ವಾಹನ ದಟ್ಟಣೆಗೆ ಅನುಗುಣವಾಗಿ ಮರುವಿನ್ಯಾಸಗೊಳಿಸಬೇಕು. ಹೆಚ್ಚುವರಿ ಪಥ ನಿರ್ಮಾಣ ಮಾಡಬಹುದು ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
‘ಒಟ್ಟು ₹56 ಕೋಟಿ ಅಗತ್ಯ’
ಐಎಸ್ಇಸಿ ಅಧ್ಯಯನ ಕರಡು ವರದಿ ಪ್ರಕಾರ, ನಗರದ 10 ಜಂಕ್ಷನ್ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಪಾವಧಿ ಯೋಜನೆಗಳಲ್ಲಿ ಒಟ್ಟು ₹56 ಕೋಟಿ ಅಗತ್ಯವಾಗಿರುತ್ತದೆ. ಸಿಎಂಟಿಐ ಜಂಕ್ಷನ್ನಲ್ಲಿ ಸುರಂಗ ಮಾರ್ಗಕ್ಕೆ ₹7 ಕೋಟಿ ಅಗತ್ಯವಾಗಿದ್ದು, ಕಣ್ತಪ್ಪಿನಿಂದ ₹700 ಕೋಟಿ ಎಂದು ಪತ್ರದಲ್ಲಿ ನಮೂದಾಗಿದೆ. ಅನುಬಂಧದಲ್ಲಿ ವಿವರವಾದ ಮಾಹಿತಿ ಇದೆ. ಅಲ್ಲದೆ, ಒಟ್ಟು ಪಾದಚಾರಿ ಮಾರ್ಗದ ಅಗತ್ಯ 8.92 ಕಿ.ಮೀ ಬದಲು 8.25 ಕಿ.ಮೀಯಾಗಿದೆ. 10 ಜಂಕ್ಷನ್ಗಳಲ್ಲಿ ವಿವಿಧ ಕಾಮಗಾರಿಗಳಿಗೆ ₹25 ಕೋಟಿ ಅಗತ್ಯವನ್ನು ವಿವರಿಸಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.