ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗೆದ್ದವರ ಕಥೆ: ವೈದ್ಯರನ್ನು ಅವಲಂಬಿಸದೆ ಕೊರೊನಾ ಗೆಲ್ಲಿರಿ

Last Updated 15 ಮೇ 2021, 21:28 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕಿನ ಬಗ್ಗೆ ಹೆದರಿಕೆಯೇ ಬೇಡ. ಸೋಂಕಿನ ಲಕ್ಷಣಗಳು ಎಷ್ಟು ಬೇಗ ಪತ್ತೆಯಾಗುತ್ತವೆಯೋ, ಅಷ್ಟೇ ಶೀಘ್ರವಾಗಿ ಚಿಕಿತ್ಸೆಗೆ ಒಳಪಡಬೇಕು. ಕೊರೊನಾ ಸಹ ಅದೇ ವೇಗದಲ್ಲಿ ನಮ್ಮಿಂದ ದೂರವಾಗುತ್ತದೆ’.

ಇದು ಕೊರೊನಾ ಗೆದ್ದು ಬಂದ ಹಿರಿಯ ವಕೀಲ ಹಾಗೂ ಕಬ್ಬನ್‍ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌ ಅವರ ಕಿವಿಮಾತು.

‘ಸೋಂಕಿತರು ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ಸೋಂಕು ತಗುಲಿದಾಗ ಅದರ ಅರಿವು ಇಲ್ಲದಿರು ವುದು, ತೀವ್ರಗೊಳ್ಳುವ ತನಕ ನಿರ್ಲಕ್ಷ್ಯ ತೋರುವುದು. ತೀವ್ರ ಹಂತದಲ್ಲಿದ್ದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುತ್ತದೆ. ಇದರಿಂದಾಗಿ ರೋಗ ವಾಸಿಯಾಗುವುದೂ ವಿಳಂಬವಾಗುತ್ತದೆ’.

‘ಸೋಂಕಿನ ಲಕ್ಷಣಗಳು ಹೇಗಿರುತ್ತವೆ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ. ನಿಮ್ಮಲ್ಲಿ ಉಸಿರಾಟ ಸಮಸ್ಯೆ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಕೊಂಡ ಕೂಡಲೇ ಕೊರೊನಾ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ‘ವರದಿ ಏನೇ ಬರಲಿ’ ಎಂಬ ಧೈರ್ಯ ನಿಮ್ಮ ಜೊತೆಗಿರಲಿ’.

‘ಕಳೆದ ತಿಂಗಳು ನನ್ನಲ್ಲಿ ಸುಸ್ತು ಕಾಣಿಸಿಕೊಂಡಿತು. ಯಾರ ಮಾತಿಗೂ ಕಾಯದೆ, ನೇರವಾಗಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಕೊರೊನಾ ತಪಾಸಣೆ ಮಾಡಿಸಿಕೊಂಡೆ. ನಿರೀಕ್ಷೆ ಯಂತೆ ಕೊರೊನಾ ದೃಢಪಟ್ಟ ವರದಿ ಬಂತು. ಇದನ್ನು ಕಂಡು ಹೆದರಲಿಲ್ಲ. ಚಿಕಿತ್ಸೆ ಪಡೆಯಲುಕೂಡಲೇ ಕಿಮ್ಸ್‌ ಆಸ್ಪತ್ರೆಗೆ ದಾಖಲಾದೆ’.

‘ನನಗಿಂತ ಮೊದಲೇ ದಾಖಲಾಗಿದ್ದ ಸೋಂಕಿತರು ತುಸು ಭಯಭೀತರಾಗಿದ್ದರು. ಕೆಲವರು ಮನೆಯಲ್ಲೇ ಕ್ವಾರಂ ಟೈನ್ ಆಗುವುದಾಗಿ ಆಸ್ಪತ್ರೆಯಿಂದ ತೆರಳುತ್ತಿದ್ದರು. ಒಬ್ಬ ರೋಗಿ ಭಯ ಪಡುವುದನ್ನು ಕಂಡು ಇತರರೂ ಹೆದರುತ್ತಿದ್ದರು. ನನ್ನ ವಾರ್ಡ್‌ನಲ್ಲಿದ್ದ ಎಲ್ಲರನ್ನೂ ಪರಿಚಯಿಸಿಕೊಂಡೆ. ಸಮಯ ಸಿಕ್ಕಾಗಲೆಲ್ಲ ಸೋಂಕು ವಿಚಾರ ಹೊರತುಪಡಿಸಿ, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ವೈದ್ಯರು ಹೇಳುವ ಸೂಚನೆಗಳನ್ನು ತಪ್ಪದೇ‍ಪಾಲಿಸುತ್ತಿದ್ದೆವು.‌ ಅಲ್ಲಿದ್ದ 22 ದಿನವೂ ಇದೇ ನನ್ನ ದಿನಚರಿ’.

‘ಆಸ್ಪತ್ರೆಯಲ್ಲಿದ್ದಾಗ ನನ್ನ ಅನುಭವಕ್ಕೆ ಬಂದಿದ್ದು, ಬಹುತೇಕರು ತಮಗೆ ಸೋಂಕು ಬಂದಿದೆ ಎಂಬ ಭೀತಿಗಿಂತ ಕುಟುಂಬದಿಂದ ದೂರವಿದ್ದೇವೆ ಎಂಬ ಆತಂಕದಲ್ಲೇ ಮುಳುಗಿರುತ್ತಾರೆ. ಇದೇ ಅವರ ಆರೋಗ್ಯಮಟ್ಟದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಸೋಂಕಿನ ಲಕ್ಷಣಗಳು ಪತ್ತೆಯಾಗಿ, ಪಾಸಿಟಿವ್ ವರದಿ ಬಂದರೂ ಹೆದರಬಾರದು’.

‘ಆಸ್ಪತ್ರೆಗೆ ಹೋಗಲೇ ಬೇಕು ಎನ್ನುವ ಅನಿವಾರ್ಯ ಇಲ್ಲ. ಮನೆಯಲ್ಲೇ ಪ್ರತ್ಯೇಕಗೊಂಡು ಎಲ್ಲ ಔಷಧಗಳನ್ನು ತಪ್ಪದೇ ತೆಗೆದುಕೊಳ್ಳಿ. ಎಲ್ಲ ರೋಗಿಗಳೂ ವೈದ್ಯರ ಮೇಲೆ ಅವಲಂಬನೆಯಾಗಬೇಕೆಂದಿಲ್ಲ. ಮನೆಯಿಂದಲೇ ಕೊರೊನಾ ಓಡಿಸಬಹುದು. ಕುಟುಂಬ ಜೊತೆಯಿರುವಾಗ ಮನೆ ಊಟವೂ ನಿಮಗೆ ಬಲ ನೀಡುವ ಮದ್ದು. ಅವ ರಿಗೆ ಮಾತನಾಡಿ, ಧೈರ್ಯ ತುಂಬುತ್ತಿರಿ. ವ್ಯಾಯಾಮ, ಯೋಗವೂ ಇರಲಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT