ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರಿನ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ನಿರಾಕ್ಷೇಪಣಾ ಪತ್ರ ಹಾಗೂ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಜಲಮಂಡಳಿ ಎಚ್ಚರಿಸಿದೆ.
ಜಲಮಂಡಳಿ ಕಾಯ್ದೆಯಂತೆ ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಗುಣಮಟ್ಟ ದೃಢೀಕರಣವಾಗಿರುವ ಪರಿಸರ ಸ್ನೇಹಿ ಸಂಸ್ಕರಿಸಿದ ನೀರನ್ನು ಮಾತ್ರ ಬಳಸಬೇಕೆಂದು ಆದೇಶಿಸಲಾಗಿದೆ. ಅದಕ್ಕೆ ಪೂರಕವಾಗಿ, ಜಲಮಂಡಳಿ ವತಿಯಿಂದ ‘ಪರಿಸರ ಜಲಸ್ನೇಹಿ’ ವೆಬ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಸಂಸ್ಕರಿಸಿದ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಜಲಮಂಡಳಿ ಅಧ್ಯಕ್ಷರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಸ್ವಂತ ಕೊಳವೆಬಾವಿ ಸೇರಿದಂತೆ ಇತರೆ ಮೂಲದಿಂದ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳುವಂತಿಲ್ಲ. ಇದಕ್ಕೆ ನಿಷೇಧ ಹೇರಲಾಗಿದ್ದು, ಇದನ್ನು ಉಲ್ಲಂಘಿಸಿದರೆ, ಕಟ್ಟಡ ನಿರ್ಮಾಣಕ್ಕೆ ಜಲಮಂಡಳಿ ನೀಡಿರುವ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸಲಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿಯನ್ನು ಹಿಂಪಡೆಯಲು ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಯಾರಾದರೂ ಟ್ಯಾಂಕರ್, ಕೊಳವೆಬಾವಿ ನೀರು ಬಳಸುತ್ತಿದ್ದರೆ ನಾಗರಿಕರು 1916ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದಿದ್ದಾರೆ.
ನೀರು ಹರಿವು ನಿಯಂತ್ರಕಕ್ಕೆ ಸೂಚನೆ
ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಅತಿ ಅವಶ್ಯಕವಾಗಿರುವುದರಿಂದ ನಲ್ಲಿಗಳಿಗೆ ‘ನೀರು ಹರಿವು ನಿಯಂತ್ರಕ’ಗಳನ್ನು (ಫ್ಲೋ ರಿಸ್ಟ್ರಿಕ್ಟರ್) ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಮಾಲ್, ವಾಣಿಜ್ಯ ಸಂಕೀರ್ಣ, ದೇವಸ್ಥಾನ, ಐಷಾರಾಮಿ ಹೋಟೆಲ್, ರೆಸ್ಟೊರೆಂಟ್ ಹಾಗೂ ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆಗಾಗಿ ನೀರು ಬಳಸುವ ನಲ್ಲಿಗಳಿಗೆ ಕಡ್ಡಾಯವಾಗಿ ‘ನೀರು ಹರಿವು ನಿಯಂತ್ರಕ’ಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಶೇ 50ರಷ್ಟು ನೀರಿನ ಬಳಕೆ ಕಡಿಮೆಯಾಗಲಿದೆ ಎಂದಿದ್ದಾರೆ.