ಬೆಂಗಳೂರು: ಶ್ರವಣದೋಷವುಳ್ಳ 100 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲುರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಮುಂದಾಗಿದೆ.
ಕೊರೊನಾ ಕಾಲಘಟ್ಟದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ಲ್ಯಾಪ್ಟಾಪ್ ಅಗತ್ಯ ಇರುವುದನ್ನು ಅರಿತು ಈ ಕಾರ್ಯವನ್ನು ವೇದಿಕೆ ಕೈಗೆತ್ತಿಕೊಂಡಿದೆ.
‘ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೂ ಅನುಕೂಲ ಆಗುವಂತೆ ಉತ್ತಮ ದರ್ಜೆಯ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ. ಸದ್ಯ 15 ಜನರಿಗೆ ವಿತರಣೆ ಮಾಡಲಾಗಿದೆ. ಒಟ್ಟು 100 ವಿದ್ಯಾರ್ಥಿಗಳಿಗೆ ವಿತರಿಸುವ ಗುರಿ ಇದೆ’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಶಿವಣ್ಣ ತಿಳಿಸಿದರು.
ವಿದ್ಯಾರ್ಥಿ ಗುರುತಿನ ಚೀಟಿಯೊಂದಿಗೆ ಬರುವ ವಿದ್ಯಾರ್ಥಿಗಳಿಗೆ ಈ ಅನುಕೂಲ ಕಲ್ಪಿಸಲಾಗುತ್ತಿದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಶಯದೊಂದಿಗೆ ಈ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ 16,200 ಮಕ್ಕಳಿಗೆ ಹೈಜನಿಕ್ ಹೆಲ್ತ್ ಕಿಟ್ ವಿತರಣೆಯನ್ನು ವೇದಿಕೆ ವತಿಯಿಂದ ಮಾಡಲಾಗಿದೆ. ಶೌಚಾಲಯ ನಿರ್ಮಾಣ, ಹೊಗೆಮುಕ್ತ ಹಳ್ಳಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ರೀತಿಯ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ವೇದಿಕೆ ಮೂಲಕ ಮಾಡಲಾಗಿದೆ ಎಂದರು.
ಗುರುತಿನ ಚೀಟಿಯೊಂದಿಗೆ ವಿದ್ಯಾರ್ಥಿಗಳು ಸಂಪರ್ಕ ಮಾಡಬೇಕಾದ ಸಂಖ್ಯೆ: 94484 17379.