ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ತಂತ್ರಜ್ಞಾನಗಳ ಮಾಹಿತಿಯನ್ನು ಶೀಘ್ರವಾಗಿ ರೈತರಿಗೆ ತಲುಪಿಸಲು ಶ್ರಮಜೀವಿ ವಾಹಿನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಜಿಕೆವಿಕೆ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
‘ಈ ವಿನೂತನ ಪ್ರಯತ್ನದಿಂದ ಅತ್ಯುತ್ತಮ ಕಾರ್ಯಕ್ರಮಗಳು ರೂಪುಗೊಂಡು, ಕೃಷಿ ತಂತ್ರಜ್ಞಾನಗಳು ಸಕಾಲಕ್ಕೆ ರೈತರಿಗೆ ತಲುಪಲಿವೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಹೇಳಿದರು.
ಶ್ರಮಜೀವಿ ವಾಹಿನಿ ಮುಖ್ಯಸ್ಥ ವೆಂಕಟರಮಣ ಹೆಗಡೆ,‘ ಶ್ರಮಜೀವಿ ಟಿ.ವಿ.ಯು ಒಂದು ಒಟಿಟಿ ಮಾಧ್ಯಮ. ‘ಫಾರ್ಮ್ ಟಿ.ವಿ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನುಉಚಿತವಾಗಿ ವೀಕ್ಷಿಸಬಹುದು’ ಎಂದು ವಿವರಿಸಿದರು.
ವಿಸ್ತರಣಾ ನಿರ್ದೇಶಕ ಎನ್.ದೇವಕುಮಾರ್, ಸಂಶೋಧನಾ ನಿರ್ದೇಶಕ ವೈ.ಜಿ. ಷಡಕ್ಷರಿ, ಕುಲಸಚಿವ ಬಸವೇಗೌಡ ಮತ್ತು ವಾರ್ತಾ ತಜ್ಞ ಕೆ.ಶಿವರಾಮು ಭಾಗವಹಿಸಿದ್ದರು.