ಬೆಂಗಳೂರು: ‘ಗುರುರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಲೆಕ್ಕಮರುಪರಿಶೀಲನೆ ನಡೆಯಬೇಕು. ಈ ಮೊದಲು ಲೆಕ್ಕಪರಿಶೋಧನೆ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಶುಕ್ರವಾರ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿದ ಅವರು, ‘ಗ್ರಾಹಕರಿಗೆ ಶೇ 14ರ ಬಡ್ಡಿದರದಲ್ಲಿ ಸಾಲ ನೀಡಬೇಕು. ಈ ಪ್ರಕರಣದಲ್ಲಿ ಶೇ 18ರಷ್ಟು ಬಡ್ಡಿ ಪಡೆಯುತ್ತಿದ್ದರೂ ಅಧಿಕಾರಿಗಳು ಗಮನಿಸಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಯಾವುದೇ ಕಾರಣಕ್ಕೂ ಹೂಡಿಕೆದಾರರು ಗಾಬರಿಯಾಗಬಾರದು. ಅವರೊಂದಿಗೆ ಸಹಕಾರ ಇಲಾಖೆ ಇದೆ ಎಂಬುದನ್ನು ಮನದಟ್ಟು ಮಾಡಬೇಕು. ಈ ಕುರಿತು ಸಭೆ ಮಾಡಿ, ಹೂಡಿಕೆದಾರರಿಗೆ ಸಲಹೆ ಸೂಚನೆ ನೀಡಬೇಕು. ಒಟ್ಟಿನಲ್ಲಿ ಬ್ಯಾಂಕ್ ಉಳಿಯಬೇಕು’ ಎಂದು ಅವರು ಹೇಳಿದರು.
‘ಬ್ಯಾಂಕ್ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲಿಸಬೇಕು. ಎಷ್ಟು ವರ್ಷ ಅವಧಿಯ ಲೆಕ್ಕಮರುಪರಿಶೀಲನೆ (ರಿಆಡಿಟ್) ನಡೆಯಬೇಕು ಎಂಬುದನ್ನು ನಿರ್ಧರಿಸಿ ಶೀಘ್ರ ವರದಿ ನೀಡಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಸೂಚಿಸಿದರು.
‘ಬ್ಯಾಂಕ್ನ ಸಿಇಒ, ಅಧ್ಯಕ್ಷ, ಉಪಾಧ್ಯಕ್ಷರು ಮಾತ್ರ ಅವ್ಯವಹಾರ ಮಾಡಿದ್ದಾರೆ. ಇವರೆಲ್ಲರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.