ಬೆಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಗ್ರಾಹಕರಿಂದ ಒನ್ ಟೈಂ ಪಾಸ್ವರ್ಡ್ (ಒಟಿಪಿ) ಪಡೆದು ವಂಚಿಸಿದ್ದ ಆರೋಪದಡಿ ಶಿವಪ್ರಸಾದ್ ಮಾಡಗಿ (30) ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬೀದರ್ ನಿವಾಸಿಯಾದ ಶಿವಪ್ರಸಾದ್ನ ಕೃತ್ಯದ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈತ ಹಲವರಿಗೆ ವಂಚನೆ ಮಾಡಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.
‘ವಕೀಲರಿಗೆ ಕರೆ ಮಾಡಿದ್ದ ಆರೋಪಿ, ತಾನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ. ಕ್ರೆಡಿಟ್ ಕಾರ್ಡ್ ಅವಧಿ ಮುಕ್ತಾಯವಾಗಿದ್ದು, ಅದನ್ನು ನವೀಕರಣ ಮಾಡಬೇಕೆಂದು ತಿಳಿಸಿದ್ದ. ಅದೇ ನೆಪದಲ್ಲಿ ಕಾರ್ಡ್ ಮಾಹಿತಿ ಸಹ ಪಡೆದುಕೊಂಡಿದ್ದ.’
‘ಮಾಹಿತಿ ಬಳಸಿಕೊಂಡು ಹಣ ವರ್ಗಾವಣೆ ಮಾಡಿಕೊಳ್ಳಲು ಮುಂದಾಗಿದ್ದ ಆರೋಪಿ, ಪುನಃ ವಕೀಲರಿಂದ ಐದು ಬಾರಿ ಒಟಿಪಿ ಪಡೆದುಕೊಂಡಿದ್ದ. ನಂತರ, ಅವರ ಖಾತೆಯಲ್ಲಿದ್ದ ₹97,998 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ’ ಎಂದು ಪೊಲೀಸರು ಹೇಳಿದರು.