ಹೆಸರಘಟ್ಟ: ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಲಕೆರೆ ಗ್ರಾಮದಲ್ಲಿ ಜಲಶಕ್ತಿ ಅಭಿಯಾನಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ಚಾಲನೆ ನೀಡಿದರು.
‘ನಮ್ಮೂರ ಕೆರೆಗಳ ಹೂಳು ತೆಗೆದು ರಾಜಕಾಲುವೆ ಸ್ವಚ್ಚ ಮಾಡಿ ನೀರು ಸಂಗ್ರಹವಾಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಜಲಶಕ್ತಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ದೊಡ್ಡ ಬ್ಯಾಲಕೆರೆ ಗ್ರಾಮದ ಕೆರೆಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಪಕ್ಷಭೇದ ಮರೆತು ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.
ನಗರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳ ದಡದಲ್ಲಿ ಗಿಡಗಳನ್ನು ನೆಡಲಾಗುವುದು.ಈಗಾಗಲೇ ಐವತ್ತು ಸಾವಿರ ಸಸಿಗಳನ್ನು ಕೊಡುವುದಕ್ಕೆ ಒಂದು ಸಂಸ್ಥೆ ಮುಂದೆ ಬಂದಿದೆ. ಆ ಗಿಡಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುವುದು’ ಎಂದರು.
‘ಕೆರೆಗಳ ಹೂಳು ತೆಗೆದು ಕೆರೆಯನ್ನು ಅಚ್ಚುಕಟ್ಟಾಗಿ ಅಭಿವೃದ್ದಿ ಪಡಿಸಿದವರಿಗೆ ಮೊದಲ ಬಹುಮಾನವಾಗಿ ₹50 ಸಾವಿರ, ದ್ವೀತಿಯ ಬಹುಮಾನವಾಗಿ ₹25 ಸಾವಿರ, ತೃತೀಯ ಬಹುಮಾನವಾಗಿ ₹15 ಸಾವಿರ ನೀಡಲಾಗುವುದು’ ಎಂದರು.
ಉಪಕಾರ್ಯದರ್ಶಿ ಡಾ.ಸಿ. ಸಿದ್ದರಾಮಯ್ಯ, ‘ನರೇಗಾ ಯೋಜನೆಯಡಿ ಕೆರೆಗಳನ್ನು ನೂರು ದಿನಗಳಲ್ಲಿ ಅಭಿವೃದ್ದಿ ಪಡಿಸಲಾಗುವುದು. ಗ್ರಾಮದಲ್ಲಿರುವರಿಗೆ ನೂರು ದಿನಕ್ಕೆ ಸುಮಾರು ₹28 ಸಾವಿರದಷ್ಟು ಸಂಬಳ ಸಿಗುತ್ತದೆ’ ಎಂದರು.