ಬುಧವಾರ, ಮಾರ್ಚ್ 22, 2023
32 °C

ನಮ್ಮದು ಈಸ್ಟ್‌ ಇಂಡಿಯಾ ಕಂಪನಿ ಆಳ್ವಿಕೆಯಲ್ಲ: ಬಿಡಿಎ ಕಿವಿ ಹಿಂಡಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮದು ಈಸ್ಟ್‌ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲ. ಕಲ್ಯಾಣ ರಾಜ್ಯದ ಆಶಯಗಳನ್ನು ಹೊಂದಿದ ಆಡಳಿತ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಿವಿ ಹಿಂಡಿರುವ ಹೈಕೋರ್ಟ್, ಪದ್ಮನಾಭನಗರ ನಿವಾಸಿಯೊಬ್ಬರ ಬೆಲೆಬಾಳುವ ಎರಡು ನಿವೇಶನಗಳನ್ನು ‘ನಾಗರಿಕ ಸೌಲಭ್ಯಗಳಿಗೆ ಮೀಸಲಿರಿಸಲಾದ (ಸಿಎ) ನಿವೇಶನಗಳು‘ ಎಂದು ಹೇಳಿದ್ದ ಬಿಡಿಎ ಆಯುಕ್ತರ ಆದೇಶವನ್ನು ವಜಾಗೊಳಿಸಿದೆ.

ಬಿಡಿಎ ಆದೇಶ ಪ್ರಶ್ನಿಸಿ ಬಿ.ವಿ. ಓಂಪ್ರಕಾಶ್‌ ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು?: ಶ್ರೀ ರಾಧಾಕೃಷ್ಣ ಹೌಸ್‌ ಬಿಲ್ಡಿಂಗ್‌ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ ಖಾಸಗಿ ಲೇಔಟ್‌ ಅಭಿವೃದ್ಧಿಪಡಿಸಿತ್ತು. ಇದಕ್ಕೆ ಕಟ್ಟಡ ನಿರ್ಮಾಣ ಕ್ಷೇತ್ರದ ತರಬೇತಿ ಮಂಡಳಿಯು (ಸಿಐಟಿಬಿ) 1993ರ ಅಕ್ಟೋಬರ್‌ 24ರಂದು ಒಪ್ಪಿಗೆ ನೀಡಿತ್ತು. ಏತನ್ಮಧ್ಯೆ, 1973ರ ಲೇಔಟ್‌ ಯೋಜನೆಯ ಅಧಿಕೃತತೆ ಆಕ್ಷೇಪಿಸಿ ಕಂದಾಯ ಅಧಿಕಾರಿ ಪ್ರಮಾಣಪತ್ರ ಸಲ್ಲಿಸಿದ್ದರು. ವಿಚಾರಣೆ ವೇಳೆ ಬಿಡಿಎ ವಕೀಲರು ಈ ಅಂಶದ ಬಗ್ಗೆ ನ್ಯಾಯಪೀಠದ ಗಮನ ಸೆಳೆದಿದ್ದರು.

ಪ್ರಕರಣವನ್ನು ಪರಿಶೀಲಿಸಿದ ನ್ಯಾಯಪೀಠವು, ‘ಸಂವಿಧಾನದ 300ಎ ವಿಧಿಯಡಿ ಆಸ್ತಿಯ ಹಕ್ಕುಗಳನ್ನು ಖಾತರಿಪಡಿಸಲಾಗಿದೆ. ಹೀಗಾಗಿ, ಲೇಔಟ್‌ ಯೋಜನೆಯ ಅಧಿಕೃತತೆಯ ಬಗ್ಗೆ ಯಾವುದೇ ವಿವಾದ ಇಲ್ಲ. ಸೊಸೈಟಿಯಿಂದ ಅಧಿಕಾರಿಗಳು ಸೂಕ್ತ ಮಾಹಿತಿ ಪಡೆದುಕೊಂಡಿದ್ದರೆ, ಅರ್ಜಿದಾರರನ್ನು ಈ ಸ್ಥಿತಿಗೆ ದೂಡುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು