ಬೆಂಗಳೂರು: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಬೇಕಾಗಿದ್ದ 9 ಜನ ಪ್ರಯಾಣಿಕರು, ನಿಯೋಜಿತ ವಿಮಾನ ಪ್ರಯಾಣ ರದ್ದಾದ ಕಾರಣ ಮುಂಗಡ ಬುಕ್ಕಿಂಗ್ ಮಾಡಿದ್ದ ವಿಮಾನಯಾನ ಕಂಪನಿಯಿಂದ ₹ 1,20,452 ಮೊತ್ತ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಶರಣ್ಯ ಶೆಟ್ಟಿ ಸೇರಿದಂತೆ ಒಂಬತ್ತು ಜನ ನೀಡಿದ್ದ ದೂರನ್ನು ವಿಚಾರಣೆ ನಡೆಸಿದ, ಬೆಂಗಳೂರು ನಗರ ಜಿಲ್ಲಾ ಮೂರನೇ ಹೆಚ್ಚುವರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ಆರ್.ವೆಂಕಟಸುದರ್ಶನ್ ಹಾಗೂ ಸದಸ್ಯೆ ಎಲ್.ಮಮತಾ ಪರಿಹಾರ ನೀಡುವಂತೆ ಏರ್ ಪೆಗಾಸಸ್ ಕಂಪನಿಗೆ ಆದೇಶಿಸಿದ್ದಾರೆ. ದೂರುದಾರರ ಮೊದಲ ತಂಡ ಬೆಂಗಳೂರಿನಿಂದ ಹುಬ್ಬಳ್ಳಿಗೆ 2016ರ ನವೆಂಬರ್ 12ರಂದು ತೆರಳಿ ನವೆಂಬರ್ 13ಕ್ಕೆ ಬೆಂಗಳೂರಿಗೆ ಹಿಂದಿರುಗಬೇಕಿತ್ತು. ಅಂತೆಯೇ ಎರಡನೇ ತಂಡವು 2016ರ ನವೆಂಬರ್ 12ರಂದು ಬೆಂಗಳೂರಿನಿಂದ ತೆರಳಿ ನವೆಂಬರ್ 14ರಂದು ಬೆಂಗಳೂರಿಗೆ ವಾಪಸು ಬರಬೇಕಿತ್ತು. ಇದಕ್ಕಾಗಿ ಅವರು ‘ಏರ್ ಪೆಗಾಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ವಿಮಾನದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು.
ಆದರೆ ಕಂಪನಿಯು ಪ್ರಯಾಣ ರದ್ದತಿಯ ಕುರಿತು ಇಮೇಲ್ ಕಳುಹಿಸಿ, ಸದ್ಯವೇ ಹಣ ಹಿಂದಿರುಗಿಸುವುದಾಗಿ ಹೇಳಿತ್ತು.