ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಗಳ ಮಾರ್ಗವಾದ ಹೆದ್ದಾರಿಗಳು

ಹೊಸೂರು, ತುಮಕೂರು, ಬಳ್ಳಾರಿ ಮಾರ್ಗವೇ ಅತ್ಯಂತ ಅಪಾಯಕಾರಿ
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಅಕ್ಷರ ಗಾತ್ರ

ಆದಿತ್ಯ ಕೆ.ಎ.

ಬೆಂಗಳೂರು: ರಾಜಧಾನಿ ಮೂಲಕ ಹಾದು ಹೋಗಿರುವ (ಕಮಿಷನರೇಟ್‌ ವ್ಯಾಪ್ತಿಯಲ್ಲಿ) ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಹಾಗೂ ಹೊರವರ್ತುಲ, ನೈಸ್‌ ರಸ್ತೆ ಹಾಗೂ ಮುಖ್ಯರಸ್ತೆಗಳು ಅಪಘಾತ ಮಾರ್ಗಗಳಾಗಿದ್ದು , ವರ್ಷದಿಂದ ವರ್ಷಕ್ಕೆ ಇಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ನಗರ ಸಂಪರ್ಕಿಸುವ ರಸ್ತೆಗಳಲ್ಲಿ 2020ರಲ್ಲಿ 632, 2021ರಲ್ಲಿ 618, 2022ರಲ್ಲಿ ಒಟ್ಟು 752 ಅಪಘಾತಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರಸ್ತೆಗಳ ಮೂಲಕವೇ ನಿತ್ಯ ಸಾವಿರಾರು ಸಂಖ್ಯೆಯ ವಾಹನಗಳು ರಾಜಧಾನಿ ಪ್ರವೇಶಿಸುತ್ತವೆ. ರಾತ್ರಿ ವೇಳೆ ಹೊರ ರಾಜ್ಯದಿಂದ ಸರಕು ಸಾಗಾಣಿಕೆ ಲಾರಿಗಳು ನಗರಕ್ಕೆ ಬರುತ್ತವೆ. ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಆಗ ವಾಹನಗಳ ಅತಿವೇಗಕ್ಕೆ ಕಡಿವಾಣವೂ ಇಲ್ಲವಾಗಿದೆ. ಇದೇ ಕಾರಣಕ್ಕೆ ನಿತ್ಯ ಈ ಮಾರ್ಗಗಳಲ್ಲಿ ಅಪಘಾತ ಸಂಭವಿಸುತ್ತಿವೆ. ಹೆದ್ದಾರಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೂ ಅಪಘಾತಕ್ಕೆ ಕಾರಣವಾಗಿದ್ದು, ಸಾವು–ನೋವು ತಂದೊಡ್ಡುತ್ತಿದೆ.

ನಗರದಲ್ಲಿ 1.20 ಕೋಟಿ ವಾಹನಗಳಿದ್ದು, ನಿತ್ಯ ಎರಡು ಸಾವಿರ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಹೆದ್ದಾರಿಗಳಲ್ಲಿ ವಾಹನ ಏರಿಕೆ ಕಾಣಿಸಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಯಿಲ್ಲ ಎಂದು ವಾಹನ ಚಾಲಕರು ದೂರಿದ್ದಾರೆ.

ತುಮಕೂರು ಹಾಗೂ ಹಾಸನ ಕಡೆಗೆ ಸಂಪರ್ಕಿಸುವ ಗೊರಗುಂಟೆಪಾಳ್ಯ ಫ್ಲೈಓವರ್‌ ಮೇಲೆ ಬೃಹತ್ ವಾಹನಗಳ ಸಂಚಾರ ನಿರ್ಬಂಧಿಸಿ ವರ್ಷವೇ ಕಳೆದಿದೆ. ಕೆಳಮಾರ್ಗದಲ್ಲೇ ಕಾರು, ಬೈಕ್‌ಗಳ ನಡುವೆಯೇ ಬಸ್‌ಗಳು, ಲಾರಿಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ದಿನದ 24 ಗಂಟೆಯೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಭಾರಿ ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದೆ ಎಂದು ನಾಗರಿಕರು ದೂರುತ್ತಾರೆ.

ಮೂರು ಅಪಾಯಕಾರಿ ಮಾರ್ಗಗಳು

ಬಳ್ಳಾರಿ ರಸ್ತೆ, ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸಿವೆ. ಈ ಮಾರ್ಗದಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕ್ಯಾಮೆರಾ ಅಳವಡಿಕೆ, ಅಲ್ಲಲ್ಲಿ ವೈಜ್ಞಾನಿಕವಾಗಿ ಹಂಪ್ಸ್‌ ನಿರ್ಮಾಣ, ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ತಕ್ಷಣವೇ ಮುಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.

ರಸ್ತೆ ಬದಿಯಲ್ಲೇ ಲಾರಿಗಳು

ಹಗಲು ವೇಳೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಬರುವ ಲಾರಿಗಳಿಗೆ ಪ್ರವೇಶದ ನಿರ್ಬಂಧವಿದೆ. ಹೀಗಾಗಿ, ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನ (ಬಿಐಇಸಿ) ಬಳಿಯ ಹೆದ್ದಾರಿ ಪಕ್ಕದಲ್ಲೇ ವಾಹನಗಳು ಬೀಡುಬಿಟ್ಟಿರುತ್ತವೆ. ರಾತ್ರಿ ವೇಳೆ ಅವುಗಳು ಒಮ್ಮೆಲೇ ಕೈಗಾರಿಕಾ ಪ್ರದೇಶಕ್ಕೆ ಬರುವ ಕಾರಣಕ್ಕೆ ಅಪಘಾತ ನಡೆಯುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಎಂ.ಎನ್.ಅನುಚೇತ್‌
ಎಂ.ಎನ್.ಅನುಚೇತ್‌

‘ಸ್ಪೀಡ್‌ ಟ್ರ್ಯಾಪ್‌ ಕ್ಯಾಮೆರಾ’

ಅಳವಡಿಕೆ ಹೆದ್ದಾರಿಗಳಲ್ಲಿ ಅತಿವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಒಟ್ಟು 12 ‘ಸ್ಪೀಡ್‌ ಟ್ರ್ಯಾಪ್‌ ಕ್ಯಾಮೆರಾ’ ಹಾಕಲಾಗಿದೆ. ವೇಗದ ಮಿತಿ ದಾಟಿದ ಎಲ್ಲ ವಾಹನಗಳ ಚಾಲಕರಿಗೂ ದಂಡ ವಿಧಿಸಲಾಗುತ್ತಿದೆ. ಹೊಸೂರು ರಸ್ತೆಯಲ್ಲೂ (ಎಲೆಕ್ಟ್ರಾನಿಕ್‌ ಸಿಟಿ) ಸ್ಪೀಡ್‌ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಲಾಗುವುದು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ವೇಗವನ್ನು ಈ ಕ್ಯಾಮೆರಾಗಳು ಪತ್ತೆ ಹಚ್ಚಲಿವೆ. ಅಗತ್ಯವಿರುವ ಬೇರೆ ಮಾರ್ಗದಲ್ಲೂ ಕ್ಯಾಮೆರಾ ಹಾಕಲಾಗುವುದು.

–ಎಂ.ಎನ್‌.ಅನುಚೇತ್‌ ಜಂಟಿ ಕಮಿಷನರ್‌ ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT