ಬೆಂಗಳೂರು: ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿರುವ ಉದ್ಯಮಿ ವರುಣ್ ಶಾ ಮನೆಯಲ್ಲಿ ಕಳ್ಳತನ ಎಸಗಿದ್ದ ಆರೋಪದಡಿ ಕೆಲಸಗಾರ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
‘ಬಿಹಾರದ ಚೋಟು ಕುಮಾರ್ (19), ರಂಜಿತ್ ಕುಮಾರ್ (19), ಗೌತಮ್ ಕುಮಾರ್ (20) ಹಾಗೂ ಪಂಕಜ್ ಕುಮಾರ್ (22) ಬಂಧಿತರು. ಅವರಿಂದ ₹ 20 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಮಾರತ್ತಹಳ್ಳಿ ಬಳಿಯ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಿದ್ದರು. ಆರೋಪಿ ಚೋಟುಕುಮಾರ್, ಉದ್ಯಮಿ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ. ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಇರುವುದನ್ನು ತಿಳಿದುಕೊಂಡಿದ್ದ.’
‘ಉದ್ಯಮಿ ವರುಣ್ ಕುಟುಂಬ ಸಮೇತ ಇತ್ತೀಚೆಗೆ ಹೊರ ರಾಜ್ಯಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಚೋಟುಕುಮಾರ್, ಇತರೆ ಆರೋಪಿಗಳನ್ನು ಮನೆಗೆ ಕರೆಸಿಕೊಂಡು ಕಳ್ಳತನ ಮಾಡಿದ್ದ. ಮನೆಗೆ ವಾಪಸು ಬಂದಿದ್ದ ಉದ್ಯಮಿಗೆ ಕಳ್ಳತನ ಗಮನಕ್ಕೆ ಬಂದಿತ್ತು. ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.
‘ಕದ್ದ ವಸ್ತುಗಳ ಸಮೇತ ಬಿಹಾರಕ್ಕೆ ಹೋಗಲು ಆರೋಪಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ದೂರು ದಾಖಲಾದ ಆರು ಗಂಟೆಯಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಹೇಳಿವೆ.