ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ: ಜನೌಷಧ ಕೇಂದ್ರದ ಉದ್ಘಾಟನೆ

Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಗಾಂಧಿ ಗ್ರಾಮದಲ್ಲಿ ಉನ್ನತೀಕರಿಸಿದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ಆದಿಚುಂಚನಗಿರಿಯ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಂಗಳವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ ‘ಮನುಷ್ಯನಿಗೆ ಸಾಧನೆ ಎಷ್ಟು ಮುಖ್ಯವೂ ಅದಕ್ಕಿಂತ ಹೆಚ್ಚು ಮನಸ್ಸಿನ ಆರೋಗ್ಯವೂ ಮುಖ್ಯ. ಮನುಷ್ಯ ಕೋಪ ಮಾಡಿಕೊಳ್ಳದೇ ಸಮಾಧಾನ ಚಿತ್ತದೊಂದಿಗೆ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಸ್ಥಳೀಯರಿಗೆ ಉಚಿತವಾಗಿ ಅತ್ಯುತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಇಲ್ಲಿ ಪರಿಣತ ವೈದ್ಯರಿದ್ದು, ವರ್ಚ್ಯುಯಲ್‌ ಕ್ಲಿನಿಕ್ ಕೂಡ ಇದೆ. ಆಧುನಿಕತೆ, ಒತ್ತಡ, ವೃತ್ತಿಗಳ ಸಂಕೀರ್ಣತೆ, ಜೀವನಶೈಲಿ ಇತ್ಯಾದಿಗಳಿಂದ ಆಯುಸ್ಸು 90 ವರ್ಷಗಳಿಂದ 70 ವರ್ಷಕ್ಕೆ ಇಳಿದಿದೆ. ಆದ್ದರಿಂದ ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚಿನ ಗಮನ‌ ಕೊಡಬೇಕು. ಈ ಆಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳೂ ಇವೆ’ ಎಂದರು.

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ‘ಇಂದು ದೇಶದಲ್ಲಿ ಶೇಕಡ 60ರಷ್ಟು ಸಾವುಗಳಿಗೆ ಜೀವನಶೈಲಿಯೇ ಕಾರಣ. ಚಿಕ್ಕ ವಯಸ್ಸಿನವರಲ್ಲೇ ಮಧುಮೇಹ, ಹೃದ್ರೋಗ, ರಕ್ತದೊತ್ತಡ ಕಂಡು ಬರುತ್ತಿದೆ. ಕನಿಷ್ಠ ಪಕ್ಷ ಎಲ್ಲರೂ ದಿನವೂ ಒಂದು ಗಂಟೆ ಕಾಲ ವಾಕಿಂಗ್ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಾವು ಹಿಂದಿನವರ ಆಹಾರ ಪದ್ಧತಿಯನ್ನು ಅರಿತು, ರೂಢಿಸಿ ಕೊಳ್ಳಬೇಕು. ಜನರು ಬೈಸಿಕಲ್, ಮೆಟ್ರೋ ಮೂಲಕ ಸಂಚಾರ ಮಾಡಬೇಕು. ತಂತ್ರಜ್ಞಾನದ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು, ಮನುಷ್ಯ ಸಂಬಂಧಗಳಿಗೆ ಮಹತ್ವ ನೀಡಬೇಕು’ ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT