ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರಿಗಾಗಿ ಐಡಿಯಾಥಾನ್ ಸ್ಪರ್ಧೆ– ಡಿಕೆಶಿ ಪುತ್ರಿಯ ಪರಿಕಲ್ಪನೆ

Published 13 ನವೆಂಬರ್ 2023, 12:23 IST
Last Updated 13 ನವೆಂಬರ್ 2023, 12:23 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರಿಗಾಗಿ’ ಹೊಸ ಆಲೋಚನೆಗಳ ಆವಿಷ್ಕಾರ ಉದ್ದೇಶದಿಂದ ‘ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ’ ಆಯೋಜಿಸುವ ಪರಿಕಲ್ಪನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪುತ್ರಿ  ಐಶ್ವರ್ಯ ಡಿಕೆಎಸ್ ಹೆಗ್ಡೆ ರೂಪಿಸಿದ್ದು, 2024ರ ಜ.13‌ರಂದು ನಡೆಯಲಿರುವ ಯುವ ನಾಯಕತ್ವ ಸಮ್ಮೇಳನದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಡಿ.ಕೆ. ಶಿವಕುಮಾರ್ ಅವರು ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಯುವ ನಾಯಕತ್ವ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಚಿಂತನೆ, ಪ್ರತಿಭೆ ಆವಿಷ್ಕಾರ ಕಾರ್ಯಕ್ರಮ ಹೇಗಿರಬೇಕು ಎನ್ನುವುದು ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರ ಪರಿಕಲ್ಪನೆಯಾಗಿದೆ. ನಗರ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸುವುದು ಐಶ್ವರ್ಯ ಅವರ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಗಣ್ಯರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಸ್ಪರ್ಧೆಯ ವಿದ್ಯಾರ್ಥಿಗಳು ಪರಿಣಾಮಕಾರಿ ಪರಿಹಾರ ಕೇಂದ್ರಿತ ಉತ್ತಮ ನಾಗರಿಕರಾಗಲು ಉತ್ತೇಜನ ನೀಡಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ಪೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ಅವರು ಯುವ ನಾಯಕತ್ವ ಸಮ್ಮೇಳನದ ಮುಖ್ಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಬೆಂಗಳೂರಿನ ಇತರೆ ಗಣ್ಯರು ಇರಲಿದ್ದಾರೆ.

ಐಡಿಯಾಥಾನ್ ಹಾಗೂ ಯುವ ನಾಯಕತ್ವ ಸಮ್ಮೇಳನ ಕಾರ್ಯಕ್ರಮಗಳನ್ನು ‌ಕ್ವಿಜ್ ಮಾಸ್ಟರ್ ಹಾಗೂ ಶಿಕ್ಷಣ ತಜ್ಞ ಗಿರಿ ಪಿಕ್ ಬ್ರೈನ್ ಬಾಲಸುಬ್ರಮಣಿಯಂ ನೇತೃತ್ವದ ಗ್ರೇಕ್ಯಾಪ್ಸ್ ನಾಲೇಡ್ಜ್ ಟ್ರೈಬ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ

‘ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ’:

‘ಐಡಿಯಾಥಾನ್ 23’ ಅಂತರ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ನಗರದ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ರೂಪಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವುದು ಇದರ ಮೂಲ ಉದ್ದೇಶವಾಗಿದೆ. ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲು ಈ ವಿಶಿಷ್ಟ ಅಂತರ-ಶಾಲಾ ಸ್ಪರ್ಧೆಯನ್ನು ಘೋಷಿಸಲಾಗಿದೆ. ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ನಗರದಾದ್ಯಂತ ಶಾಲೆಗಳಲ್ಲಿ ವಿಭಿನ್ನ ಐಡಿಯಾಥಾನ್ ಮತ್ತು ಯುವ ನಾಯಕತ್ವ ಸಮ್ಮೇಳನ ನಡೆಯಲಿದೆ.

ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವನ್ನಾಗಿಸಲು ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ‘ಬ್ರ್ಯಾಂಡ್ ಬೆಂಗಳೂರು’ ಕಾರ್ಯಕ್ರಮದ ಮೂಲ ಉದ್ದೇಶಗಳ ಬಗ್ಗೆ ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಲು, ಇದೇ ಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರದಲ್ಲಿರುವ ಶಾಲೆಗಳ 10ರಿಂದ 12 ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲೆಯು ಇಬ್ಬರು ವಿದ್ಯಾರ್ಥಿಗಳ ಒಂದು ತಂಡವನ್ನು ಕಳಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ತಮ್ಮ ವಿಚಾರ ಮಂಡಿಸಲು ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೊದಲು ನೋಂದಣಿಯಾಗುವ 200 ಶಾಲೆಗಳಿಗೆ ಮಾತ್ರ ಅವಕಾಶ ಲಭಿಸಲಿದೆ. ಆಸಕ್ತ ಶಾಲೆಗಳು 2023 ಡಿ. 5ರ ಒಳಗೆ https://www.youngleadersofbengaluru.com ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಗರದ ಸುಧಾರಣೆಗೆ ತಮ್ಮ ಸಲಹೆ, ಪರಿಹಾರ ಸೂಚಿಸಬೇಕು. ಹಲವು ಸುತ್ತಿನ ನಂತರ ಅತ್ಯುತ್ತಮ ಆಲೋಚನೆಗಳು, ಸಲಹೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ ತೀರ್ಪುಗಾರರ ಮುಂದೆ ಇಡಲಾಗುವುದು. ಐಡಿಯಾಥಾನ್ ಪರಿಹಾರಗಳು 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಯ ಸುತ್ತ ಕೇಂದ್ರೀಕೃತವಾಗಲಿವೆ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT