ಬೆಂಗಳೂರು: ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಿದೇಶದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ನೀತಿ ನಿರೂಪಕರನ್ನು ಒಳಗೊಂಡ ’ಜಿ–20ಯ ಎಸ್–20’ ಶೃಂಗ ಸಭೆಯ 100ಕ್ಕೂ ಹೆಚ್ಚು ಪ್ರತಿನಿಧಿಗಳು ಜಗ್ಗಿ ವಾಸುದೇವ್ ಅವರೊಂದಿಗೆ ಸಂವಾದ ನಡೆಸಿದರು.
ಸಂವಾದಲ್ಲಿ ಮಾತನಾಡಿದ ಜಗ್ಗಿ ವಾಸುದೇವ್ ಅವರು, ‘ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯೆಡೆಗೆ ನಮ್ಮ ಬದ್ಧತೆ ಇರಲಿ. ಪ್ರಪಂಚವನ್ನು ಪ್ರಜ್ಞಾವಂತ ದಿಕ್ಕಿನ ಕಡೆಗೆ ಕೊಂಡೊಯ್ಯಬೇಕು’ ಎಂದು ಆಶಿಸಿದರು.
ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, ‘ವಿಜ್ಞಾನಕ್ಕಷ್ಟೇ ಸೀಮಿತವಾಗದೇ ಮತ್ತಷ್ಟು ವಿಷಯಗಳ ಬಗ್ಗೆ ಆಳ ಅಧ್ಯಯನ ನಡೆಸಬೇಕಿದೆ. ಒಂದು ಸಮಗ್ರ ದೃಷ್ಟಿಕೋನವನ್ನು ಪಡೆಯಲು ಸಭೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಹೇಳಿದರು.
ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ಸಿಟಿ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಅಧ್ಯಕ್ಷ ಡಾ.ಮುನೀರ್ ಡೆಸೋಕಿ ಮಾತನಾಡಿ, ‘ಈಶಾ ಕೇಂದ್ರದಂತಹ ಪ್ರಶಸ್ತ ಸ್ಥಳದಲ್ಲಿ ಗಂಭೀರ ವಿಷಯಗಳು ಹಾಗೂ ಸವಾಲು ಎದುರಿಸುವ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.
ಎಸ್–20 ಸಹ ಅಧ್ಯಕ್ಷ ಪ್ರೊ.ಅಶುತೋಷ್ ಶರ್ಮ, ಈ ಸ್ಥಳವು ಭಾರತದ ಬಗ್ಗೆ ಹೊಸ ನೆನಪುಗಳು ಹಾಗೂ ಹೊಸ ಅನಿಸಿಕೆಗಳ ಛಾಪು ಮೂಡಿಸಲು ಸಹಕಾರಿ ಆಗಲಿದೆ ಎಂದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನಾಗರಾಜ ನಾಯ್ಡು ಕಾಕನೂರ್, ವಿಜ್ಞಾನ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಗುರಿ ಹೊಂದಿದ್ದರೆ, ಅಧ್ಯಾತ್ಮವು ಸತ್ಯ ಅರ್ಥ ಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ಹೇಳಿದರು.
ಜುಲೈ 21ರಿಂದ ಎರಡು ದಿನಗಳ ಕಾಲ ಸಮಾವೇಶ ನಡೆಯಿತು. 35 ದೇಶದ ಪ್ರತಿನಿಧಿಗಳು ಹಾಗೂ 65 ಮಂದಿ ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಹಸಿರು ಭವಿಷ್ಯಕ್ಕಾಗಿ ಶುದ್ಧ ಇಂಧನ, ಸಮಗ್ರ ಅರೋಗ್ಯ ಮತ್ತು ವಿಜ್ಞಾನವನ್ನು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವ ವಿಚಾರಗಳ ಕುರಿತು ಚರ್ಚಿಸಲಾಯಿತು.
ಈಶಾ ಫೌಂಡೇಶನ್ನ ಕಲಾವಿದರು ಸಮರ ಕಲೆ ಕಳರಿಪಯಟ್ಟು, ಶಾಸ್ತ್ರೀಯ ನೃತ್ಯ ಕಲೆ, ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿತ್ತು.