ಬೆಂಗಳೂರು: ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪತ್ರಕರ್ತ ಶಿವಕುಮಾರ್ ಭೋಜಶೆಟ್ಟರ್ (69) ಎಂಬುವರನ್ನು ಸೋಮವಾರ ಬಂಧಿಸಿದ್ದ ಹನುಮಂತನಗರ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
‘ಪತ್ರಕರ್ತೆಯಾಗಿರುವ 30 ವರ್ಷದ ಮಹಿಳೆ ನೀಡಿದ್ದ ದೂರಿನಡಿ ಶಿವಕುಮಾರ್ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ 354ಎ), ಜೀವ ಬೆದರಿಕೆ (ಐಪಿಸಿ 506) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹನುಮಂತನಗರ ಪೊಲೀಸರು ಹೇಳಿದರು.
‘ಆರೋಪಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗಿತ್ತು. ಲಭ್ಯವಿರುವ ಪುರಾವೆಗಳನ್ನು ಆಧರಿಸಿ ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಟ್ಟು ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ದೂರಿನ ವಿವರ: ‘ಎರಡು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಶಿವಕುಮಾರ್ ಭೋಜಶೆಟ್ಟರ್, ಹಿರಿಯ ಪತ್ರಕರ್ತ ಎಂದು ಹೇಳಿಕೊಂಡಿದ್ದರು. ಕಾರ್ಯಕ್ರಮ ಮಾಡೋಣವೆಂದು ಹೇಳುತ್ತಿದ್ದ ಅವರು ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
‘ಹದಿನೈದು ದಿನಗಳ ಹಿಂದಷ್ಟೇ ಕಾಫಿ ಡೇನಲ್ಲಿ ಭೇಟಿಯಾಗಿದ್ದ ಅವರು ಅಶ್ಲೀಲವಾಗಿ ಮಾತನಾಡಲಾರಂಭಿಸಿದ್ದರು. ವಾಟ್ಸ್ಆ್ಯಪ್ಗೂ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಅವರು ಹೇಳಿದಂತೆ ಕೇಳದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.