‘ಬೆಂಗಳೂರು ವಿಶ್ವವಿದ್ಯಾಲಯ: ಭಾಷಾ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಿರಾಕರಣೆ’

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಎಂ.ಎ ಪ್ರವೇಶಾತಿಗೆ ಪದವಿಯಲ್ಲಿ ಐಚ್ಛಿಕ ಕನ್ನಡ ವ್ಯಾಸಂಗ ಮಾಡಿದವರನ್ನು ಮಾತ್ರ ಪರಿಗಣಿಸುತ್ತಿದೆ. ಇದರಿಂದಾಗಿ ಭಾಷಾ ವಿದ್ಯಾರ್ಥಿಗಳು ಪ್ರವೇಶಾತಿಯಿಂದ ವಂಚಿತರಾಗುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ವಿಶ್ವವಿದ್ಯಾಲಯ ಕುಲಪತಿಗೆ ಪತ್ರ ಬರೆದಿದ್ದಾರೆ. ‘ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಎಂ.ಎ ಪ್ರವೇಶಾತಿಗೆ ಪದವಿ ಹಂತದಲ್ಲಿ ಕನ್ನಡವನ್ನು ಐಚ್ಛಿಕವಾಗಿ ಅಥವಾ ಸಾಮಾನ್ಯ ವಿಷಯವಾಗಿ ಓದಿರುವುದನ್ನು ಪರಿಗಣಿಸುತ್ತಿವೆ. 5 ವರ್ಷಗಳ ಬಿ.ಎ. ಆನರ್ಸ್ ಪದವಿ, ಪಿಯುಸಿ ನಂತರದ ಕನ್ನಡ ಡಿಪ್ಲೊಮಾ, ರಾಜ್ಯ ಸರ್ಕಾರದ ಪಂಡಿತ ಪರೀಕ್ಷೆ, ಬಿ.ಇಡಿ ಪದವಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರತ್ನ ಹಾಗೂ ಮದ್ರಾಸು ವಿಶ್ವವಿದ್ಯಾಲಯದ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನೂ ಪರಿಗಣಿಸುತ್ತಿವೆ. ಬೆಂಗಳೂರು ವಿಶ್ವವಿದ್ಯಾಲಯ ಮಾತ್ರ ಈ ರೀತಿಯ ಷರತ್ತನ್ನು ವಿಧಿಸುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.
‘ವಿಶ್ವವಿದ್ಯಾಲಯದ ಈ ಕ್ರಮ ಸರಿಯಲ್ಲ. ಕನ್ನಡ ಸ್ನಾತಕೋತ್ತರ ಅಧ್ಯಯನ ಬಯಸಿ ಬರುವ ವಿದ್ಯಾರ್ಥಿಗಳ ಆಸಕ್ತಿಗೆ ತಣ್ಣೀರೆರಚುವ ಕೆಲಸ ಮಾಡದೆ ಅವರಿಗೆ ಪ್ರವೇಶಾತಿ ನೀಡಲು ಮುಂದಾಗಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.