ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ನಿತ್ಯೋತ್ಸವ ಅಭಿಯಾನ’: ಬಣ್ಣ ಮಾಸಿದ ಬಾವುಟ ಬದಲಿಸುವ ‘ಕರ್ತವ್ಯ’

Last Updated 13 ಮೇ 2022, 1:12 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಸಂಘ ಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ನಗರದ ಹಲವೆಡೆ ಹಾರಿಸಿರುವ ನಾಡಧ್ವಜಗಳ ಪೈಕಿ ಹಲವು ಹರಿದು ಹೋಗಿವೆ. ಕೆಲ ಬಾವುಟಗಳ ಬಣ್ಣವೇ ಮಾಸಿ ಹೋಗಿದೆ. ಇಂತಹ ಧ್ವಜಗಳನ್ನು ತೆರವು ಮಾಡಿ ಹೊಸ ಬಾವುಟ ಹಾರಿಸುವ ಉದ್ದೇಶದಿಂದ ‘ಕನ್ನಡ ನಿತ್ಯೋತ್ಸವ ಅಭಿಯಾನ’ ಶುರುವಾಗಿದೆ.

ಈ ಅಭಿಯಾನದ ರೂವಾರಿ ವಿನೋದ್‌ ಕರ್ತವ್ಯ. ‘ಬೆಂಗಳೂರು ಹುಡುಗರು’ ತಂಡದ ವಿನೋದ್‌, ಪ್ರತಿ ಭಾನುವಾರ ನಗರದ ಒಂದೊಂದು ಸ್ಥಳಕ್ಕೆ ಭೇಟಿ ನೀಡಿ ಹಾಳಾದ ಧ್ವಜ ತೆರವು ಮಾಡುತ್ತಿದ್ದಾರೆ. ಸ್ವಂತ ಹಣದಲ್ಲೇ ಹೊಸ ಧ್ವಜವನ್ನು ಖರೀದಿಸಿ ಅಳವಡಿಸುತ್ತಿದ್ದಾರೆ. ಈವರೆಗೂ ಒಟ್ಟು 17 ಸ್ಥಳಗಳಲ್ಲಿ ಹೊಸ ಬಾವುಟ ರಾರಾಜಿಸುವಂತೆ ಮಾಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟುಹಾಕಿದ್ದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನಾಡ ಧ್ವಜದ ಬಗ್ಗೆ ಅಷ್ಟೊಂದು ಅಭಿಮಾನ ಹೊಂದಿರುವ ನಮ್ಮ ಜನ, ತಮ್ಮ ಬೀದಿಗಳಲ್ಲೇ ಹರಿದ ಹಾಗೂ ಬಣ್ಣ ಮಾಸಿದ ಬಾವುಟ ಕಂಡರೂ ಬದಲಿಸದಿರುವುದು ಬೇಸರ ತರಿಸಿತ್ತು.ನಾಗರಿಕರಿಗೆ ನಾಡಧ್ವಜದ ಮಹತ್ವ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಯಿತು’ ಎಂದು ವಿನೋದ್‌ ತಿಳಿಸಿದರು.

‘ಇಂದಿರಾನಗರ ಮೆಟ್ರೊ ನಿಲ್ದಾಣದ ಬಳಿ ಧ್ವಜವೊಂದು ಶಿಥಿಲಾವಸ್ಥೆಯಲ್ಲಿತ್ತು. ಈ ವರ್ಷದ ಗಣರಾಜ್ಯೋತ್ಸವದಂದು ಅದನ್ನು ಬದಲಾಯಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದೆವು. ಅಂದಿನಿಂದ ಪ್ರತಿ ವಾರವೂ ಈ ಕಾರ್ಯ ಮುಂದುವರಿದಿದೆ. ಆಟೊ ಹಾಗೂ ಕ್ಯಾಬ್‌ ಚಾಲಕರು ಹಾಳಾಗಿರುವ ಬಾವುಟದ ಚಿತ್ರ ಹಾಗೂ ಸ್ಥಳದ ಮಾಹಿತಿ ನೀಡುತ್ತಾರೆ’ ಎಂದು ಅವರು ಹೇಳಿದರು.

‘ಕೆಂಪಾಂಬುಧಿ ಕೆರೆ, ಮಾರತ್ತಹಳ್ಳಿ,ಇಂದಿರಾನಗರ, ಜಯನಗರ, ಲಕ್ಷ್ಮಿಪುರ, ಕೆ.ಜಿ.ರಸ್ತೆ, ಚಿಕ್ಕಪೇಟೆ, ಮೆಜೆಸ್ಟಿಕ್‌, ಬಿನ್ನಿಪೇಟೆ, ಯಶವಂತಪುರ ಸೇರಿದಂತೆ ಹಲವೆಡೆ ಬಾವುಟ ಬದಲಿಸಿದ್ದೇನೆ. ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಕೆಲಸದಿಂದ ಪ್ರೇರಣೆಗೊಂಡು ಬೆಳಗಾವಿ ಮತ್ತು ಹಾಸನದಲ್ಲೂ ಯುವಕರ ತಂಡಗಳು ಮಾಸಿದ ಬಾವುಟಗಳನ್ನು ಬದಲಿಸುವ ಅಭಿಯಾನ ಆರಂಭಿಸಿರುವುದು ಖುಷಿ ನೀಡಿದೆ’ ಎಂದು ಹೇಳಿದರು.

‘ಮೊದಲು ₹150 ತೆತ್ತು ಬಾವುಟವೊಂದನ್ನು ಖರೀದಿಸುತ್ತಿದ್ದೆ. ನನ್ನ ಕನ್ನಡ ಕಾಯಕ ಮೆಚ್ಚಿ ಅಂಗಡಿಯವರು ರಿಯಾಯಿತಿ ದರದಲ್ಲಿ ಧ್ವಜ ಒದಗಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT