ಬೆಂಗಳೂರು: ‘ಕೆಪಿಎಸ್ಸಿ, 276 ಕೆಎಎಸ್ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದ್ದು, 2011ರಲ್ಲಿ ಕೆಎಎಸ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಪರಿಗಣಿಸದೆ ಒಂದು ಹೆಚ್ಚುವರಿ ಅವಕಾಶ ನೀಡಬೇಕು’ ಎಂದು ರಾಜ್ಯ ದಲಿತ ಪದವೀಧರರ ಸಂಘವು ಆಗ್ರಹಿಸಿದೆ.
’2019ರಲ್ಲಿ ಕೋವಿಡ್ ಕಾರಣಕ್ಕೆ ಹಿಂದಿನ ಸರ್ಕಾರ ಆರ್ಥಿಕ ಬಿಕ್ಕಟ್ಟಿನ ಸಲುವಾಗಿ ಮೂರು ವರ್ಷಗಳ ಕಾಲ ಹುದ್ದೆಗಳ ನೇಮಕಾತಿ ತಡೆಹಿಡಿಯಲಾಗಿತ್ತು. 2011ರ ಕೆಎಎಸ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎರಡು ಬಾರಿ ಹಾಗೂ ಹೈಕೋರ್ಟ್ ಮೂರು ಬಾರಿ ತೀರ್ಪು ನೀಡಿತ್ತು. ಇದರ ವಿರುದ್ಧವಾಗಿ ಸರ್ಕಾರವು 2021ರಲ್ಲಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ನೀಡಿತ್ತು. ಆದರೆ, 2011ರಲ್ಲಿ ಪರೀಕ್ಷೆ ಬರೆದು ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ಸರ್ಕಾರ ಯಾವುದೇ ಸಾಮಾಜಿಕ ನ್ಯಾಯ ನೀಡಿಲ್ಲ’ ಎಂದು ಸಂಘದ ಅಧ್ಯಕ್ಷ ವಿ. ಲೋಕೇಶ್ ಅವರು ದೂರಿದ್ದಾರೆ.
ಕಳೆದ 9 ವರ್ಷಗಳಿಂದ ಕೆಎಎಸ್ ಹುದ್ದೆಗಳನ್ನು ಭರ್ತಿ ಮಾಡದೆ ವಿಳಂಬ ಮಾಡಲಾಗಿದೆ. ಕೆಎಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದು ಹೆಚ್ಚುವರಿ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಈಗಲಾದರೂ ಒಂದು ಹೆಚ್ಚುವರಿ ಅವಕಾಶ ನೀಡುವಂತೆ ಅವರು ಆಗ್ರಹಿಸಿದ್ದಾರೆ.