ಕೆಂಗೇರಿ: ಸ್ಥಳೀಯ ಸಂಸ್ಥೆಗಳು ಮೂಲಸೌಕರ್ಯ ಒದಗಿಸುವುದರ ಜತೆಗೆ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎಂದು ತಟಗುಪ್ಪೆ ಮೌಂಟ್ ಕಾರ್ಮೆಲ್ ಚರ್ಚ್ ಧರ್ಮಗುರು ಆರ್.ಥಾಮಸ್ ಹೇಳಿದರು.
ಬೆಂಗಳೂರು ದಕ್ಷಿಣ ತಾಲೂಕು ತರಳು ಗ್ರಾಮ ಪಂಚಾಯಿತಿ ವತಿಯಿಂದ ತಟಗುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
‘ಉತ್ತಮ ಪರಿಸರ ಹೊಂದಿದ್ದ ಹಳ್ಳಿಗಳು ನಗರೀಕರಣದ ಪ್ರಭಾವಕ್ಕೆ ಒಳಗಾಗಿ ವಾಯುಮಾಲಿನ್ಯ ಜಲಮಾಲಿನ್ಯಗಳಿಗೆ ತುತ್ತಾಗಿ, ಜನರ ಬದುಕು ಸಂಕಷ್ಟಕ್ಕೆ ಸಿಲುಕಿವೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ’ ಎಂದು ತಿಳಿಸಿದರು.
‘ಗ್ರಾಮ ಸಭೆಯಲ್ಲಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಖಂಡನೆ ವ್ಯಕ್ತವಾಯಿತು. ಇಲಾಖೆಯ ಸವಲತ್ತುಗಳು ಘೋಷಣೆಗೆ ಸೀಮಿತವಾಗಿದೆ. ಜನರನ್ನು ತಲುಪುತ್ತಿಲ್ಲ. ಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜನರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಜಿ.ಮಹೇಶ್ ಕುಮಾರ್ ಮಾತನಾಡಿದರು. ಇದೇ ವೇಳೆ ಬಿಬಿಎಂಪಿ ವತಿಯಿಂದ ಮೂರು ಆಟೊ ಟಿಪ್ಪರ್ ಹಾಗೂ ಒಂದು ಲಾರಿಯನ್ನು ಪಂಚಾಯಿತಿಗೆ ಹಸ್ತಾಂತರಿಸಲಾಯಿತು.