ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ರವಾಗಿ ಬೆಳೆದ ಪ್ರಜಾಪ್ರಭುತ್ವ, ತಿದ್ದಲು ಒಂದಾಗಿ: ಕೋಡಿಹಳ್ಳಿ ಚಂದ್ರಶೇಖರ್

Published 9 ಜೂನ್ 2024, 15:39 IST
Last Updated 9 ಜೂನ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾಪ್ರಭುತ್ವ ವಕ್ರವಾಗಿ ಬೆಳೆದಿದ್ದು, ಹಣ ಇರುವ ಮತ್ತು ಜನ ಸೇರಿಸುವ ಶಕ್ತಿ ಇರುವವರಷ್ಟೇ ಜನಪ್ರತಿನಿಧಿಗಳಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ರೈತ ಸಂಘಗಳು ಮತ್ತು ದಲಿತ ಸಂಘರ್ಷ ಸಮಿತಿಗಳು ಒಂದಾಗಿ ಚಳವಳಿ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.

ದಸಂಸ–50, ಪ್ರೊ. ಕೃಷ್ಣಪ್ಪವರ 86ನೇ ಜನ್ಮದಿನದ ಅಂಗವಾಗಿ ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ–ಕರ್ನಾಟಕ (ಆರ್‌ಪಿಐ–ಕೆ), ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಭಾನುವಾರ ಹಮ್ಮಿಕೊಂಡಿದ್ದ ‘ಸ್ವಾಭಿಮಾನಿ ಚಳವಳಿ ಮತ್ತು ಅಂಬೇಡ್ಕರ್‌ ಸಿದ್ಧಾಂತ–ಸಮಾಲೋಚನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘ ಒಟ್ಟಿಗೆ ಸಾಗುತ್ತಿದ್ದಾಗ ಚಳವಳಿಗಳು ತೀವ್ರ ವೇಗದಲ್ಲಿದ್ದವು. ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಹತ್ತಿರದವರೆಗೆ ಸಾಗಿದ್ದವು. ಆಗ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಅಧಿಕಾರಕ್ಕೆ ಬರಲಾಗಲಿಲ್ಲ. ಆನಂತರ ಡಿಎಸ್‌ಎಸ್‌ ಮತ್ತು ರೈತ ಸಂಘಗಳು ಒಗ್ಗಟ್ಟು ಕಳೆದುಕೊಂಡು ದೂರವಾದವು. ಚಳವಳಿಯು ಕಾವು ಕಳೆದುಕೊಂಡಿತು ಎಂದು ವಿಶ್ಲೇಷಿಸಿದರು.

‘ಈಗ ನ್ಯಾಯ, ನೀತಿ, ಸತ್ಯದ ಹೋರಾಟದ ಮೂಲಕ ರಾಜಕೀಯ ಅಧಿಕಾರವನ್ನು ಹಿಡಿಯಲು ಸಾಧ್ಯವೇ ಇಲ್ಲದ ಹಾಗೆ ಚುನಾವಣಾ ರಾಜಕಾರಣವನ್ನು ಪಕ್ಷಗಳು ಕಲುಷಿತಗೊಳಿಸಿವೆ. ಇದನ್ನು ಸರಿಪಡಿಸಬೇಕಿದ್ದರೆ ಚಳವಳಿಗಾರರು ಒಂದಾಗಬೇಕು‘ ಎಂದರು.

ಎಂಎಸ್‌ಪಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡದೇ ಹೋದರೆ ರೈತರು ಬದುಕುವುದು ಕಷ್ಟ. ಹಾಗೆಯೇ ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಸರಿಪಡಿಸಿಲ್ಲ. ಈ ಎರಡೂ ವಿಚಾರಗಳನ್ನು ಇಟ್ಟುಕೊಂಡು ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಎಲ್ಲರೂ ಕೈಜೋಡಿಬೇಕು ಎಂದು ಕೋರಿದರು.

ಆರ್‌ಪಿಐ–ಕೆ ಅಧ್ಯಕ್ಷ ಆರ್‌. ಮೋಹನರಾಜು, ಮುಖಂಡರಾದ ರಾಜು ಎಂ. ತಳವಾರ್‌, ಶೇಖರ್‌ ಹಾವಂಜೆ, ಸ್ವಪ್ನ ಮೋಹನ್‌, ಕೆ.ಎಂ. ಶ್ರೀನಿವಾಸ್‌, ಬಸವರಾಜ್‌ ಕೌತಾಲ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT