ಬೆಂಗಳೂರು: ನಗರದ ಮೆಜೆಸ್ಟಿಕ್ ಬಳಿಯ ಶೇಷಾದ್ರಿ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಬಸ್ ಮೈ ಮೇಲೆ ಹರಿದು ಲತಾ (55) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
‘ಹೆಬ್ಬಾಳ ಕೆಂಪಾಪುರದ ಲತಾ, ಪತಿ ಅನಂತರಾಮಕೃಷ್ಣ ಜೊತೆ ಬೈಕ್ನಲ್ಲಿ ಹೊರಟಿದ್ದರು. ಇದೇ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ’ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸರು ಹೇಳಿದರು.
‘ಲತಾ ಹಾಗೂ ಅನಂತರಾಮಕೃಷ್ಣ, ತಮ್ಮ ಮನೆಯಿಂದ ಗಾಂಧಿನಗರದಲ್ಲಿರುವ ಬಟ್ಟೆ ಮಳಿಗೆಗೆ ತೆರಳುತ್ತಿದ್ದರು. ಆನಂದರಾವ್ ವೃತ್ತದ ಡೌನ್ ರ್ಯಾಂಪ್ ಮೂಲಕ ಬೈಕ್ನಲ್ಲಿ ಬಂದು ಶೇಷಾದ್ರಿ ರಸ್ತೆಗೆ ಸೇರಿದ್ದರು. ಅದೇ ಸಂದರ್ಭದಲ್ಲಿ ಮೆಜೆಸ್ಟಿಕ್ನಿಂದ ಕೆ.ಆರ್. ವೃತ್ತದತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆಯಲ್ಲಿ ವೇಗವಾಗಿ ಹೊರಟಿದ್ದ ಕೆಎಸ್ಆರ್ಟಿಸಿ ಬಸ್, ಬೈಕ್ಗೆ ಡಿಕ್ಕಿ ಹೊಡೆದಿತ್ತು.’
‘ಬೈಕ್ ಸಮೇತ ಲತಾ ಹಾಗೂ ಅನಂತರಾಮಕೃಷ್ಣ ರಸ್ತೆಗೆ ಬಿದ್ದಿದ್ದರು. ಇದೇ ವೇಳೆ ಲತಾ ಅವರ ತಲೆ ಮೇಲೆಯೇ ಬಸ್ಸಿನ ಚಕ್ರ ಹರಿದು ಹೋಗಿದೆ. ಇದರಿಂದಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅನಂತರಾಮಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.’
‘ಕೆಎಸ್ಆರ್ಟಿಸಿ ಬಸ್ (ಕೆಎ 40 ಎಫ್ 932), ಬೆಂಗಳೂರಿನಿಂದ ಚಿಂತಾಮಣಿಗೆ ಹೊರಟಿತ್ತು. ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಬಸ್ ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.