ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ತನ್ನ ಉದ್ಯೋಗಿಗಳಿಗೆ ಅಧಿಕ ಅವಧಿ ಭತ್ಯೆ (ಓವರ್ ಟೈಮ್ ಅಲೋಯನ್ಸ್–ಓಟಿಎ) ನೀಡದಿರುವ ಕುರಿತಂತೆ 2011ರ ಮೇ 10ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ರಂಗಸಮುದ್ರದ ಕೆಎಸ್ಆರ್ಟಿಸಿ ಚಾಲಕ ಜಿ.ಎಂ.ಪೂವಯ್ಯ ಸಲ್ಲಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರ ಉದ್ಯೋಗಿಗೆ ಅಧಿಕ ಅವಧಿ ಭತ್ಯೆಯ ಬಾಕಿಯನ್ನು 8 ವಾರಗಳಲ್ಲಿ ನೀಡಬೇಕು. ಅಂತೆಯೇ ಅವರಿಗೆ ₹ 20 ಸಾವಿರ ಪಾವತಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ. ಅಂತೆಯೇ ಅಧಿಕ ಅವಧಿ ಭತ್ಯೆಗೆ (ಓಟಿಎ) ಅಡ್ಡಿಯಾಗಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.
‘ಅಧಿಕ ಅವಧಿ ಭತ್ಯೆ ಉದ್ಯೋಗಿಗಳ ಹಕ್ಕು. ಭತ್ಯೆ ನೀಡದೇ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಮತ್ತು ಸಂವಿಧಾನದ 23ನೇ ವಿಧಿಯ ಉಲ್ಲಂಘನೆ’ ಎಂದು ಹೇಳಿರುವ ನ್ಯಾಯಪೀಠ ಈ ಕುರಿತಂತೆ ಗುಜರಾತ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ.
‘ಅಧಿಕ ಅವಧಿ ಭತ್ಯೆ (ಎಸ್ಓಟಿ/ಎನ್ಎಸ್ಓಟಿ) ಹೆಚ್ಚುವರಿ ವೇತನ, ಪ್ರಯಾಣ ಭತ್ಯೆ ಇವುಗಳು ಉದ್ಯೋಗಿಗಳ ಅಸ್ಥಿರ (variable) ಹಾಗೂ ನಿರ್ದಿಷ್ಟಪಡಿಸದ (unspecifide) ಗಳಿಕೆಯಾಗುವುದರಿಂದ ವ್ಯತ್ಯಾಸದ ಪಾವತಿ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ' ಎಂದು ಕೆಎಸ್ಆರ್ಟಿಸಿ ತಿಳಿಸಿತ್ತು.