ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಸ್ಮರಣಾರ್ಥ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.
ರಜೆ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಲಾಲ್ಬಾಗ್ಗೆ ಆಗಮಿಸಿದ್ದರು. ಉದ್ಯಾನದ ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು. ಪ್ರದರ್ಶನದ ವೇಳೆ ಅವ್ಯವಸ್ಥೆಗಳಿಗೆ ಆಸ್ಪದವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ತೋಟಗಾರಿಕೆ ಇಲಾಖೆ ಮತ್ತು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಖರೀದಿಗೆ ಮುಗಿಬಿದ್ದ ಜನ
ಉದ್ಯಾನದ ಆವರಣದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಆಟಿಕೆಗಳು, ಗೃಹ ಉಪಯೋಗಿ, ಆಲಂಕಾರಿಕ ಮತ್ತು ಕರಕುಶಲ ವಸ್ತುಗಳು, ಅಡುಗೆ ಪದಾರ್ಥಗಳು, ಬ್ಯಾಗ್, ಪರ್ಸ್ ಇತ್ಯಾದಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಗಾಜಿನ ಮನೆಯ ಸುತ್ತಮುತ್ತಲು ಜನಸಂದಣಿ ಹೆಚ್ಚಿತ್ತು.
‘ವಾರಾಂತ್ಯದಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು 67 ಸಾವಿರಕ್ಕಿಂತ ಹೆಚ್ಚು ಜನ ಆಗಮಿಸಿದ್ದರು. ಒಟ್ಟು ₹ 47 ಲಕ್ಷ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದರು.