ಬೆಂಗಳೂರು: ‘ಸ್ವಾತಂತ್ರ್ಯ ಬಂದ ನಂತರ ಬೆಂಗಳೂರಿನಿಂದ ಒಬ್ಬ ಮಹಿಳೆಯೂ ಲೋಕಸಭೆಯನ್ನು ಪ್ರವೇಶಿಸಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿದ್ದು, ಅವರ ಪರ ಕೆಲಸ ಮಾಡಲು ನನ್ನನ್ನು ಅವರು ಗೆಲ್ಲಿಸುತ್ತಾರೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಶೋಕ ನಗರದಲ್ಲಿ ಚುನಾವಣೆ ಪ್ರಚಾರ ನಡೆಸಿ, ವಿವಿಧ ಕ್ಷೇತ್ರದ ಮುಖಂಡರು, ಮಹಿಳಾ ಸಂಘಟನೆಗಳ ಜೊತೆಗೆ ಅವರು ಸಂವಾದ ನಡೆಸಿದರು.
‘ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ನಗರದ ಇಂಚಿಂಚು ಅರಿವು ನನಗಿದೆ. ನಮ್ಮ ತಂದೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ ಅವರು ಮಾಡಿದ್ದ ಕೆಲಸಗಳಿಂದ ಇಂದು ಬೆಂಗಳೂರು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ’ ಎಂದರು.
‘ನಮ್ಮ ತಂದೆ ಮುಜರಾಯಿ ಇಲಾಖೆ ಸಚಿವರಾದ ನಂತರ ಆ ಇಲಾಖೆಯಲ್ಲಿ ಆಗುತ್ತಿರುವ ಎಲ್ಲಾ ಅಭಿವೃದ್ಧಿ ಬೆಳವಣಿಗಳನ್ನು ನೋಡಿ, ಎಲ್ಲಾ ಸಮಾಜದ ಜನರು ಈ ಬಾರಿ ನನ್ನ ಕೈ ಹಿಡಿಯಲಿದ್ದಾರೆ’ ಎಂದು ಹೇಳಿದರು.