ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳನ್ನು ಕಾಂಕ್ರಿಟ್‌ ಕೊಳಗಳನ್ನಾಗಿ ಮಾಡಬೇಡಿ: ಡಾ.ಟಿ.ವಿ.ರಾಮಚಂದ್ರ

Last Updated 3 ಜುಲೈ 2021, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿ ಹಾಗೂ ಪುನಶ್ಚೇತನದ ನೆಪದಲ್ಲಿ ಕೆರೆಗಳನ್ನು ಕಾಂಕ್ರಿಟ್‌ ಕೊಳಗಳನ್ನಾಗಿ ಪರಿವರ್ತಿಸಬೇಡಿ’ ಎಂದು ಐಐಎಸ್ಸಿಯ ಪ್ರಾಧ್ಯಾಪಕ ಡಾ.ಟಿ.ವಿ.ರಾಮಚಂದ್ರ ತಿಳಿಸಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನವು ‘ಸಿಂಗನಾಯಕನಹಳ್ಳಿ ಕೆರೆಯ ಪುನಶ್ಚೇತನಕ್ಕಾಗಿ ಮರಗಳಿಗೆ ಕೊಡಲಿ ಏಟು ಬೇಡ’ ವಿಷಯದ ಕುರಿತು ಆನ್‌ಲೈನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಮಾತನಾಡಿದರು.

‘ಈಯೋಜನೆ ಬಗ್ಗೆ ಆಕ್ಷೇಪವಿಲ್ಲ. ಆದರೆ ಇದನ್ನು ಅನುಷ್ಠಾನಗೊಳಿಸುತ್ತಿರುವ ಕ್ರಮ ಸರಿ ಇಲ್ಲ. ಪೈಪ್‌ವಾಲಾಗಳ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿದೆ. ಕೆರೆಯ ಸಮಗ್ರತೆಗೆ ಧಕ್ಕೆ ಬಾರದ ಹಾಗೆ ಯೋಜನೆ ಕೈಗೊಳ್ಳಬೇಕು. ಪುನಶ್ಚೇತನದ ಉದ್ದೇಶದಿಂದ ಮರಗಳ ಹನನ ಸಲ್ಲದು. ಇದರಿಂದ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ’ ಎಂದರು.

‘ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕೆರೆಗಳ ಒತ್ತುವರಿ ನಡೆಯುತ್ತಿದೆ. ಜಲ ಮೂಲಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರ ವಿರುದ್ಧ ಯುವ ಸಮುದಾಯ ಧ್ವನಿ ಎತ್ತಬೇಕು. ಪರಿಸರ ರಕ್ಷಣೆಗೆ ಸಾರ್ವಜನಿಕರ ಭಾಗವಹಿಸುವಿಕೆಯೂ ಬಹಳ ಅಗತ್ಯ.ಬಫರ್‌ ವಲಯಗಳಲ್ಲಿ ಗಿಡ ನೆಡುವಂತೆ ಸಲಹೆ ನೀಡಿದ್ದೇವೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಏಜೆನ್ಸಿಗಳು ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್‌ಗಳಿಗೆ ಪರಿಸರ ಹಾಗೂ ಜೀವವೈವಿಧ್ಯದ ಬಗ್ಗೆ ಕಾಳಜಿಯೇ ಇಲ್ಲ. ನಾವೆಲ್ಲಾ ಪರಿಸರ ಚಿಂತನೆ ಮೈಗೂಡಿಸಿಕೊಳ್ಳುವುದು ತುಂಬಾ ಅವಶ್ಯ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಎನ್‌.ನಂದಿನಿ ‘ನಗರೀಕರಣ, ಜನಸಂಖ್ಯೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆರೆಗಳ ಅಸ್ತಿತ್ವ ನಶಿಸಿಹೋಗುತ್ತಿದೆ. ರಾಸಾಯನಿಕ ಸಿಂಪಡಣೆಯಿಂದಾಗಿ ಕೃಷಿ ಭೂಮಿಗಳು ಕಲುಷಿತಗೊಳ್ಳುತ್ತಿವೆ. ಅಪರೂಪದ ಜೀವರಾಶಿಗಳು ವಿನಾಶಗೊಳ್ಳುತ್ತಿವೆ.ಸಿಂಗನಾಯಕನಹಳ್ಳಿ ಕೆರೆಯು 400 ಎಕರೆ ಕೃಷಿ ಭೂಮಿಯಿಂದ ಆವೃತ್ತವಾಗಿದೆ. ಮಳೆ ನೀರು ಇದಕ್ಕೆ ಆಧಾರ. ಕೆಲ ಷರತ್ತುಗಳ ಮೇಲೆ ಕೆರೆಯನ್ನು ಪುನಶ್ಚೇತನಗೊಳಿಸಬೇಕು.ಕೆರೆಯ ನಡುವೆ ದ್ವೀಪ ನಿರ್ಮಿಸಿ ಆ ಮೂಲಕ ಜೀವ ಸಂಕುಲದ ಉಳಿವಿಗೆ ಮುಂದಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT