ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ತೋಟಗಾರಿಕೆ ಮೇಳ| ಭರಪೂರ ಮಾಹಿತಿ ಕಣಜ, ತಂತ್ರಜ್ಞಾನದ ತಾಣ

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಮೊದಲ ದಿನವೇ 18 ಸಾವಿರ ವೀಕ್ಷಕರ ಭೇಟಿ
Published 5 ಮಾರ್ಚ್ 2024, 22:38 IST
Last Updated 5 ಮಾರ್ಚ್ 2024, 22:38 IST
ಅಕ್ಷರ ಗಾತ್ರ

ಬೆಂಗಳೂರು: ತೋಟಗಾರಿಕೆ ಕ್ಷೇತ್ರದ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು, ಬೇಸಿಗೆಯಲ್ಲೂ ನಳನಳಿಸುತ್ತಿದ್ದ ವಿವಿಧ ಬಗೆಯ ಹೂವಿನ ಗಿಡಗಳು, ತರಕಾರಿ ಹಾಗೂ ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ರೈತರು, ತರಕಾರಿ ಬಿತ್ತನೆ ಬೀಜದ ಕೌಂಟರ್‌ನಲ್ಲಿ ರೈತರ ಸರದಿ...

– ಇದು ಮಂಗಳವಾರದಿಂದ ಆರಂಭವಾದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಹೆಸರಘಟ್ಟದಲ್ಲಿ ಆಯೋಜಿಸಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ–2024’ದಲ್ಲಿ ಕಂಡು ಬಂದ ದೃಶ್ಯಗಳು.

ವಿಷಯಾಧಾರಿತವಾಗಿ ವಿಂಗಡಿಸಿದ ತಾಕುಗಳು, ಪ್ರತಿ ತಾಕುಗಳಿಗೆ ಜೋಡಿಸಿದ್ದ ನಾಮಫಲಕಗಳು ರೈತರಿಗೆ ಯಾವುದೇ ಗೊಂದಲವಿಲ್ಲದಂತೆ ತಾಕಿನ ಬಳಿಗೆ ತೆರಳಲು ನೆರವಾಗುತ್ತಿದ್ದವು. ಕಡಿಮೆ ಜಾಗದಲ್ಲಿಯೇ ಸಾಕಷ್ಟು ಮಾಹಿತಿ ಸಿಗಬೇಕು ಎಂಬ ಚಿಂತನೆಯಲ್ಲಿ ಈ ವ್ಯವಸ್ಥೆ ರೂಪಿಸಲಾಗಿತ್ತು. ಪ್ರತಿ ತಾಕಿಗೂ ಒಬ್ಬೊಬ್ಬ ಉಸ್ತುವಾರಿ ನೇಮಿಸಲಾಗಿದ್ದು, ರೈತರು ಅವರಿಂದ ಮಾಹಿತಿ ಪಡೆದರು.

ತರಕಾರಿ ತಾಕಿಗೆ ಹೆಚ್ಚು ರೈತರು ಭೇಟಿ ನೀಡುತ್ತಿದ್ದರು. ಹಣ್ಣಿನ ಬೆಳೆ, ತಂತ್ರಜ್ಞಾನಗಳ ಪ್ರದರ್ಶನವೂ ಆಕರ್ಷಣೀಯ ತಾಣವಾಗಿತ್ತು. ಹೂವಿನ ತಾಕಿನಲ್ಲಿ ಕಡಿಮೆ ಎತ್ತರದ ಚೆಂಡು ಹೂವು, ಅಲಂಕಾರಿಕ ಗ್ಲಾಡಿಯೋಲಸ್‌ ತಳಿಗಳಾದ ಅರ್ಕಾ ಕೇಸರ್‌ಗಳ ವೈಯ್ಯಾರ, ಅರ್ಕಾ ವೈಟ್‌ ಎಂಬ ಬಿಳಿ ಬಣ್ಣದ ಜರ್ಬೇರಾ, ಅರ್ಕಾ ಚೆನ್ನ ತಳಿಯ ಕನಕಾಂಬರ, ಅರ್ಕಾ ನಿರಂತರ ಎಂಬ ಸುಗಂಧರಾಜದ ಗಾಂಭೀರ್ಯ ಮೇಳಕ್ಕೆ ಮತ್ತಷ್ಟು ಮೆರುಗು ನೀಡಿದ್ದವು. ಮೇಳಕ್ಕೆ ಬಂದವರು, ಹೂವಿನ ಲೋಕದ ಎದುರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು.

ಕೃಷಿಯಲ್ಲಿ ಕಾರ್ಮಿಕರ ಕೊರತೆ ನೀಗಿಸುವಂತಹ ಯಂತ್ರೋಪಕರಣಗಳ ಬಗ್ಗೆ ರೈತರು ವಿಚಾರಿಸುತ್ತಿದ್ದರು. ರೈತರ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹತ್ತಾರು ಉಪಯುಕ್ತ ಯಂತ್ರೋಪಕರಣಗಳು ಮೇಳದ ಮತ್ತೊಂದು ಆಕರ್ಷಣೆಯಾಗಿತ್ತು.

ಈರುಳ್ಳಿ ನಾಟಿ ಮಾಡುವ ಯಂತ್ರ, ಈರುಳ್ಳಿ ಗ್ರೇಡ್ ಮಾಡುವ ಯಂತ್ರ, ಉತ್ತುವ, ಬಿತ್ತುವ, ಕೊಯ್ಲು ಮಾಡುವುದು ಸೇರಿದಂತೆ ಐಐಎಚ್‌ಆರ್ ಸಿದ್ದಪಡಿಸಿರುವ ಹಲವು ಉಪಕರಣಗಳು ಮೇಳದಲ್ಲಿದ್ದವು. ಮಳಿಗೆಗಳಲ್ಲಿ ಹಲವು ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಆಧುನಿಕ ಯಂತ್ರಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದವು. ಒಟ್ಟು 250ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿವೆ. 

ಐಐಎಚ್‌ಆರ್‌ ಆವರಣದಲ್ಲಿ ಬೆಳೆದಿರುವ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳ ಬಗ್ಗೆ ರೈತರು ವಿಜ್ಞಾನಿಗಳಿಂದ ಮಾಹಿತಿ ಪ‍ಡೆದುಕೊಳ್ಳುತ್ತಿದ್ದರು. ಮೇಳದಲ್ಲಿ ವಿವಿಧ ಬಗೆಯ ಸಾವಯವ ಹಾಗೂ ಜೈವಿಕ ಗೊಬ್ಬರದ ಮಳಿಗೆಗಳ ಮುಂದೆ ರೈತರ ಗುಂಪು– ಗುಂ‍ಪಾಗಿ ಸೇರಿದ್ದರು. ಸೋಲಾರ್‌ ಆಧಾರಿತ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಹೇಗೆ? ಇದನ್ನು ಅಳವಡಿಸಿಕೊಂಡರೆ ರೈತರು ಯಾವ ರೀತಿಯ ಲಾಭಗಳಾಗುತ್ತವೆ ಎಂಬುದರ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳುತ್ತಿದ್ದರು. 

ಗಮನ ಸೆಳೆದ ಸೆಲ್ಫಿ ಪಾಯಿಂಟ್‌:

ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಆಗಮಿಸಿದ್ದ ಎಲ್ಲರೂ ಮುಖ್ಯ ವೇದಿಕೆಯ ಬಲಭಾಗದಲ್ಲಿ ನಿರ್ಮಿಲಾಗಿದ್ದ ಸೆಲ್ಫಿ ಪಾಯಿಂಟ್‌ನಲ್ಲಿ ಫೋಟೊಗೆ ಪೋಸ್‌ ನೀಡುತ್ತಿದ್ದರು. ಯುವಕರು, ರೈತರು, ರೈತ ಮಹಿಳೆಯರು ತಂಡೋಪತಂಡವಾಗಿ ಫೋಟೊ ತೆಗೆಸಿಕೊಳ್ಳುತ್ತಿದ್ದರು.

ಬೀಜ ಖರೀದಿಯತ್ತ ರೈತರ ಚಿತ್ತ

ಮೇಳದಲ್ಲಿ ವಿವಿಧ ಬಗೆಯ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ರೈತರು ಬೀಜ ಖರೀದಿಗೆ ಮುಂದಾಗಿದ್ದರು. ಐಐಎಚ್‌ಆರ್‌ನ ಬೀಜ ಮಾರಾಟದ ಕೌಂಟರ್‌ನಲ್ಲಿ ವಿವಿಧ ತಳಿಯ ತರಕಾರಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆನ್‌ಲೈನ್‌ ಮೂಲಕವೂ ಬೀಜಗಳ ಖರೀದಿ ವ್ಯವಸ್ಥೆಯ ಬಗ್ಗೆ ಮಾಹಿತಿ ಇಲ್ಲದ ರೈತರು ಇಲ್ಲಿಗೆ ಬಂದು ತಮಗೆ ಬೇಕಾದ ಬೀಜಗಳನ್ನು ಖರೀದಿಸಲು ಸರದಿಯಲ್ಲಿ ನಿಂತಿದ್ದರು.

‘ಐಐಎಚ್‌ಆರ್‌ ಅಭಿವೃದ್ಧಿ ಪಡಿಸಿರುವ ಮೆಣಸಿನಕಾಯಿ ತಳಿಗಳು ಹೆಚ್ಚು ಇಳುವರಿ ನೀಡುತ್ತವೆ ಎಂಬುದನ್ನು ಕೇಳಿದ್ದೆ. ಆ ತಳಿಯ ಬಿತ್ತನೆಬೀಜ ಖರೀದಿಸಲು ಮೇಳಕ್ಕೆ ಬಂದಿದ್ದೇನೆ’ ಎಂದು ಚಿತ್ರದುರ್ಗ ಜಿಲ್ಲೆಯ ರೈತ ಪಾಲಯ್ಯ ತಿಳಿಸಿದರು. 

ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ತರಕಾರಿ ತಾಕುಗಳಲ್ಲಿ ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್
ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ತರಕಾರಿ ತಾಕುಗಳಲ್ಲಿ ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್
ಪುಟ್ಟೇಗೌಡ
ಪುಟ್ಟೇಗೌಡ
ಬೊಮ್ಮಮ್ಮ
ಬೊಮ್ಮಮ್ಮ

ಬೀಜ ಖರೀದಿಯತ್ತ ರೈತರ ಚಿತ್ತ ಮೇಳದಲ್ಲಿ ವಿವಿಧ ಬಗೆಯ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ರೈತರು ಬೀಜ ಖರೀದಿಗೆ ಮುಂದಾಗಿದ್ದರು. ಐಐಎಚ್‌ಆರ್‌ನ ಬೀಜ ಮಾರಾಟದ ಕೌಂಟರ್‌ನಲ್ಲಿ ವಿವಿಧ ತಳಿಯ ತರಕಾರಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆನ್‌ಲೈನ್‌ ಮೂಲಕವೂ ಬೀಜಗಳನ್ನು ಖರೀದಿ ವ್ಯವಸ್ಥೆಯ ಬಗ್ಗೆ ಮಾಹಿತಿ ಇಲ್ಲದ ರೈತರು ಇಲ್ಲಿಗೆ ಬಂದು ತಮಗೆ ಬೇಕಾದ ಬೀಜಗಳನ್ನು ಖರೀದಿಸಲು ಸರದಿಯಲ್ಲಿ ನಿಂತಿದ್ದರು. ‘ಐಐಎಚ್‌ಆರ್‌ ಅಭಿವೃದ್ಧಿ ಪಡಿಸಿರುವ ಮೆಣಸಿನಕಾಯಿ ತಳಿಗಳು ಹೆಚ್ಚು ಇಳುವರಿ ನೀಡುತ್ತವೆ ಎಂಬುದನ್ನು ಕೇಳಿದ್ದೆ. ಆ ತಳಿಯ ಬಿತ್ತನೆಬೀಜ ಖರೀದಿಸಲು ಮೇಳಕ್ಕೆ ಬಂದಿದ್ದೇನೆ’ ಎಂದು ಚಿತ್ರದುರ್ಗ ಜಿಲ್ಲೆಯ ರೈತ ಪಾಲಯ್ಯ ತಿಳಿಸಿದರು. 

ರೈತರ ಅಭಿಪ್ರಾಯ ಮೇಳದಲ್ಲಿ ನೂತನ ತಂತ್ರಜ್ಞಾನಗಳಿವೆ. ರೈತರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಮೇಳದಲ್ಲಿ ಸೌರಶಕ್ತಿಯ ಪಂಪ್‌ಸೆಟ್‌ಗೆ ನನಗೆ ಬಹಳ ಇಷ್ಟವಾಯಿತು. ನಮ್ಮ ಜಮೀನಿನಲ್ಲಿ ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ ಅಳವಡಿಸಿಕೊಳ್ಳುವ ಚಿಂತನೆ ಇದೆ. – ಪುಟ್ಟೇಗೌಡ ರೈತ ಕೆ.ಆರ್. ನಗರ ತಾಲ್ಲೂಕು ಮೈಸೂರು ಐಐಎಚ್‌ಆರ್‌ ಅಭಿವೃದ್ಧಿಪಡಿಸಿರುವ ವಿವಿಧ ಬಗೆಯ ತರಕಾರಿ ಮತ್ತು ಹೂವಿನ ತಳಿಗಳನ್ನು ನಮಗೆ ಬಹಳ ಇಷ್ಟವಾಗಿವೆ. ಅವುಗಳನ್ನು ನಮ್ಮ ಜಮೀನಿನಲ್ಲಿ ಬೆಳೆಯುವುದಕ್ಕೆ ಬೀಜಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ತೋಟಗಾರಿಕೆಯಲ್ಲಿ ಆವಿಷ್ಕರಿಸಿದ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಬೊಮ್ಮಮ್ಮ ರೈತ ಮಹಿಳೆ ರಾಮನಗರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT