ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯದಲ್ಲಿ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಸಿಗುತ್ತಿದ್ದು, ಮುದ್ರಾ ಸಾಲ ನೀಡಿಕೆಯಲ್ಲಿ ಮಾತ್ರ ಅಂತಹ ಪ್ರಗತಿ ಸಾಧಿಸಲಾಗಿಲ್ಲ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷ ಪ್ರೊ.ರಾಮ್ ಶಂಕರ್ ಕಟಾರಿಯಾ ಹೇಳಿದ್ದಾರೆ.
ಇಲ್ಲಿ ಗುರುವಾರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 11 ಸಾವಿರ ಮುದ್ರಾ ಸಾಲ ವಿತರಣೆ ಆಗಿದ್ದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿದ ಸಾಲ ಕೇವಲ 88. ಇದರ ಬಗ್ಗೆ ಗಂಭೀರ ಚಿಂತನೆ ಅಗತ್ಯ’ ಎಂದರು.
ಪರಿಶಿಷ್ಟರ ಕುಂದುಕೊರತೆಗಳ ಕುರಿತ ಮೇಲ್ವಿಚಾರಣಾ ಸಮಿತಿ ಸಭೆ ನಡೆದಿಲ್ಲದಿರುವುದನ್ನು ಆಯೋಗ ಬೊಟ್ಟುಮಾಡಿ ತೋರಿಸಿತು. ರಾಜ್ಯದಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆಯೋಗದ ಉಪಾಧ್ಯಕ್ಷ ಎಲ್.ಮುರುಗನ್, ಕೆ.ರಾಮುಲು, ಡಾ.ಯೋಗೇಂದ್ರ ಪಾಸ್ವಾನ್, ಡಾ.ಸ್ವರಾಜ್ ವಿದ್ವಾನ್ ಇದ್ದರು.