ಬೆಂಗಳೂರು: ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಶ್ಯಾಮಾನಂದ್ ದಿಗಲ್ (34) ಎಂಬಾತನನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
‘ಒಡಿಶಾದ ಶ್ಯಾಮಾನಂದ್, ಮೇ 5ರಂದು ನಗರಕ್ಕೆ ಬಂದಿದ್ದ. ಕುಮಾರಪಾರ್ಕ್ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಗಾಂಜಾ ಮಾರುತ್ತಿದ್ದ. ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ. 20 ಕೆ.ಜಿ ಗಾಂಜಾ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಒಡಿಶಾದಲ್ಲಿ ಬೆಳೆದ ಗಾಂಜಾವನ್ನು ನಗರಕ್ಕೆ ತರುತ್ತಿದ್ದ ಆರೋಪಿ, ಇಲ್ಲಿಯ ಗ್ರಾಹಕರಿಗೆ ಮಾರಿ ಹಣ ಸಂಪಾದಿಸಿಕೊಂಡು ವಾಪಸು ಹೋಗುತ್ತಿದ್ದ. ಈ ಬಾರಿ ನಮಗೆ ಸಿಕ್ಕಿಬಿದ್ದಿದ್ದಾನೆ. ಈತನ ಹಿನ್ನೆಲೆ ಹಾಗೂ ಇತರೆ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದೂ ತಿಳಿಸಿದರು.